ವಿಟ್ಲ: 7ನೇ ವೇತನ ಆಯೋಗ ಜಾರಿ, ನೂತನ ಪಿಂಚಣಿ ಪದ್ಧತಿ ರದ್ದು ಮಾಡಬೇಕೆಂದು ಒತ್ತಾಯಿಸಿ ಸರ್ಕಾರಿನೌಕರರ ಮುಷ್ಕರ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಕೆಲವು ಸರ್ಕಾರಿ ಸೇವೆಗಳು ಬಹುತೇಕ ಬಂದ್ ಆಗಿದೆ.
ವಿಟ್ಲ ಕಂದಾಯ ನಿರೀಕ್ಷಕರ ಕಛೇರಿ, ನಾಡ ಕಛೇರಿ, ಉಪ ನೊಂದಣಿ ಅಧಿಕಾರಿಗಳು ಹಾಗೂ ವಿವಾಹ ನೊಂದಣಾಧಿಕಾರಿಗಳು, ಗ್ರಾಮಕರಣಿಕರ ಸರ್ಕಾರಿ ಕಚೇರಿಗಳಲ್ಲಿ ಸೇವೆ ಲಭ್ಯವಾಗುತ್ತಿಲ್ಲ. ಶಾಲಾ ಮಕ್ಕಳಲ್ಲಿ ಆರಂಭದಲ್ಲಿ ಗೊಂದಲವಿದ್ದು, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 11 ಸಾವಿರ ನೌಕರರು ಮುಷ್ಕರಕ್ಕೆ ಪಾಲ್ಗೊಂಡಿದ್ದಾರೆ.
ವಿಟ್ಲ ರಾಜ್ಯ ಸಾರಿಗೆ ಇಲಾಖೆ , ಸಮುದಾಯ ಆರೋಗ್ಯ ಕೇಂದ್ರ ,ವಿಟ್ಲ ಪಟ್ಟಣ ಪಂಚಾಯತ್ ಸೇರಿದಂತೆ ಕೆಲವು ಸರ್ಕಾರಿ ಕಛೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ
ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜತೆ ಮಂಗಳವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದರು. ಆದರೆ, ಈ ಸಭೆ ವಿಫಲವಾಗಿದೆ. ತಡರಾತ್ರಿವರೆಗೂ ನಡೆದ ಸರಣಿ ಸಭೆ ಬಳಿಕ ಮುಷ್ಕರಕ್ಕೆ ಕೊಟ್ಟಿರುವ ಕರೆಯನ್ನು ವಾಪಸ್ ಪಡೆಯದಿರಲು ಸರ್ಕಾರಿ ನೌಕರರ ಸಂಘ ನಿರ್ಧರಿಸಿದೆ.