ಮೈಸೂರು: ಹನುಮ ಜಯಂತಿಯನ್ನು ಯಾರು ಮಾಡುತ್ತಿದ್ದಾರೆ ಗೊತ್ತಾ? ಯಾಕೆ ಮಾಡುತ್ತಿದ್ದಾರೆ ಅನ್ನೋದು ಗೊತ್ತಾ? ಹನುಮಂನಂತಹ ವ್ಯವಸ್ಥೆಯ ಗುಲಾಮರನ್ನ ಸಹಸ್ರಾರು ಸಂಖ್ಯೆಯಲ್ಲಿ ಸೃಷ್ಟಿ ಮಾಡಲು ಹೊರಟಿರುವ ಹಿಂದುತ್ವ ವಾದಿಗಳು ಹನುಮ ಜಯಂತಿ ಆಚರಿಸುತ್ತಿದ್ದಾರೆ ಎಂದು ಮೈಸೂರು ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹೇಶ್’ ಚಂದ್ರ ಗುರು ಆರೋಪಿಸಿದ್ದಾರೆ.
ಹನುಮ ಗುಲಾಮಗಿರಿಯ ಸಂಕೇತ, ರಾಮ ಪ್ರಭುತ್ವದ ಸಂಕೇತ. ನೀವು (ಮಾಧ್ಯಮ) ಹಾಗೇ ಬರೆದುಕೊಳ್ಳಿ. ಸತ್ಯ ಹೇಳಲು ನನಗೆ ಗಟ್ಸ್ ಇದೆ. ಹನುಮ ಜಯಂತಿಯ ಹಿಂದೆ ಶೂದ್ರರಲ್ಲಿ, ಅತಿಶೂದ್ರರಲ್ಲಿ, ದಲಿತರಲ್ಲಿ ಹೊಸ ಪೀಳಿಗೆಯ ಗುಲಾಮರನ್ನು ಹುಟ್ಟು ಹಾಕುವ ಹಿಡನ್ ಅಜೆಂಡ ಇದೆ. ಇದನ್ನು ನಾನು ಖಂಡಿಸುತ್ತೇನೆ. ನಮಗೆ ರಾಮ ಭಕ್ತರು ಬೇಡ, ಹನುಮ ಭಕ್ತರು ಬೇಡ. ನಮಗೆ ಯಾವ ಭಕ್ತರೂ ಬೇಡ. ವ್ಯಕ್ತಿ ಪೂಜೆ ಸಲ್ಲದು ಎಂದು ಬಾಬಾ ಸಾಹೇಬ್ ಅಂಬೇಡ್ಕರ್, ಲೋಹಿಯಾ ಹೇಳಿದ್ದಾರೆ. ಹನುಮ ಜಯಂತಿಯು ಹಿಡನ್ ಅಜೆಂಡ, ಗೌಪ್ಯ ಕಾರ್ಯಸೂಚಿ ಇರುವ ಹಿನ್ನೆಲೆಯಲ್ಲಿ ಹನುಮ ಜಯಂತಿಯನ್ನು ನಾವು ಬೆಂಬಲಿಸುವುದಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿದ್ದರಾಮಯ್ಯ ಕೂಡ ಎಂದೂ ಹನುಮ ಜಯಂತಿಯಲ್ಲಿ ಭಾಗವಹಿಸಲಿಲ್ಲ. ಆದರೆ, ಅವರು ಹನುಮ ಜಯಂತಿ ಪರವಾಗಿಯೂ ಇಲ್ಲ, ವಿರುದ್ಧವಾಗಿಯೂ ಇಲ್ಲ. ವೈಕುಂಠ ಏಕಾದಶಿ ದಿನದಂದು ಸಿದ್ದರಾಮಯ್ಯ ದೇವರ ದರ್ಶನ ಪಡೆದಿದ್ದಾರೆ. ಅದು ಅವರ ವೈಯಕ್ತಿಕ ನಂಬಿಕೆ. ಅವರು ಎಂದಿಗೂ ಹಿಂದೂ ವಿರೋಧಿಯಲ್ಲ, ಕೃಷ್ಣ, ಹನುಮನ ವಿರೋಧಿಯಲ್ಲ. ಆದರೆ, ಅವರ ವರ್ಚಸ್ಸಿಗೆ ಮಸಿ ಬಳಿಯಲು ಕೆಲವು ಸ್ಥಾಪಿತ ಹಿತಾಶಕ್ತಿಗಳು ರಾಜಕೀಯದಲ್ಲೂ ಅಪಪ್ರಚಾರ ಮಾಡುತ್ತಿದ್ದಾರೆ. ಮಾಧ್ಯಮದಲ್ಲೂ ಅಪ್ರಚಾರ ಮಾಡುತ್ತಿದ್ದಾರೆ. ಇಂತ ಅಪಪ್ರಚಾರಕ್ಕೆ ಪ್ರಜ್ಞಾವಂತರು ಕಿವಿಗೊಡಬಾರದು ಎಂದರು.