ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ಹರ್ಷಿಕಾ ಪೂಣಚ್ಚ- ಭುವನ್ ಸಜ್ಜಾಗಿದ್ದಾರೆ. ಕೊಡಗಿನ ವಿರಾಜ್ಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ನಡೆಯಲಿದೆ. ಇಂದು (ಆಗಸ್ಟ್ 24) ಬೆಳಿಗ್ಗೆ 10:30ಕ್ಕೆ ಹರ್ಷಿಕಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಆಗಸ್ಟ್ 23ರಂದು ವಿರಾಜ್ಪೇಟೆಯಲ್ಲಿ ಊರ್ಕುಡುವ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ. ಜೈ ಜಗದೀಶ್ ದಂಪತಿ, ಅನುಪ್ರಭಾಕರ್ ದಂಪತಿ ಸೇರಿದಂತೆ ಹಲವು ಹರ್ಷಿಕಾ ಮದುವೆ ಸಂಭ್ರಮದಲ್ಲಿ ಭಾಗಿಯಾದರು. ಇದೀಗ ಹರ್ಷಿಕಾ- ಭುವನ್ ಹೊಸ ಬಾಳಿಗೆ ಕಾಲಿಡಲು ಕ್ಷಣಗಣನೆ ಶುರುವಾಗಿದೆ.
ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ದರು. ಫಸ್ಟ್ ಇಂಪ್ರೆಶನ್ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದರು ಎಂದು ಹರ್ಷಿಕಾ ಹೇಳಿದ್ದಾರೆ.
ಇಷ್ಟು ದಿನ ನಮ್ಮ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೇ ಇರಲಿ ಅಂತಾ ಮದುವೆ ವಿಚಾರ ಹೇಳಿರಲಿಲ್ಲ. ವೃತ್ತಿರಂಗದಲ್ಲಿ ಸೆಟಲ್ ಆಗಬೇಕಾದ ಕಾರಣ, ಇಬ್ಬರು ಸೈಲೆಂಟ್ ಆಗಿ ಇದ್ವಿ. ನಮ್ಮ ಲವ್ ಸ್ಟೋರಿ ಬಗ್ಗೆ ಆತ್ಮೀಯರಿಗೆ ತಿಳಿದಿತ್ತು. ಆದರೆ ಇತ್ತೀಚಿಗೆ ಎಲ್ಲರಿಗೂ ಗೊತ್ತಾಯ್ತು. ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಹೇಳಿದ್ದಾರೆ.
ನಾನು ಈಗ ಮದುವೆಯಾಗುವ ಐಡಿಯಾದಲ್ಲಿ ಇರಲಿಲ್ಲ. ಪ್ಲ್ಯಾನ್ ಲೇಟ್ ಇತ್ತು. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಈಗ ಎರಡು ತಿಂಗಳ ಹಿಂದೆ ಮದುವೆ ಬಗ್ಗೆ ಪ್ಲ್ಯಾನ್ ಮಾಡಿದ್ವಿ. ಮುಂದಿನ ನಮ್ಮಿಬ್ಬರ ಕೊಡವ ಶೈಲಿಯಲ್ಲಿ ಮದುವೆ ಎಂದು ಖುಷಿಯಿಂದ ಭುವನ್ ಮಾತನಾಡಿದ್ದಾರೆ.