ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಶನಿವಾರ ನಡೆದ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ಬಳಿಕ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ದಲಿತ ಯುವತಿ ಮೇಲೆ ಅತ್ಯಾಚಾರ, ಕೊಲೆಯಿಂದ ಹಿಡಿದು ಆಕೆಯ ಪೋಷಕರ ಅನುಪಸ್ಥಿತಿಯಲ್ಲಿ ಸಂಶಯಾಸ್ಪದವಾಗಿ ಶವಸಂಸ್ಕಾರ ಮಾಡುವವರೆಗೆ ಈ ಪ್ರಕರಣದ ಎಳೆ ಎಳೆಯನ್ನೂ ತನಿಖೆಗೆ ಒಳಪಡಿಸಬೇಕು ಎಂದು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
ಆದರೆ, ಹತ್ರಾಸ್ ಅತ್ಯಾಚಾರದದಲ್ಲಿ ಬಲಿಯಾದ 19 ವರ್ಷದ ದಲಿತ ಯುವತಿಯ ಪೋಷಕರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇಂದು ಡಿಜಿಪಿ ಹೆಚ್.ಸಿ. ಅವಾಸ್ಥಿ ಹಾಗೂ ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಅವಿನಾಶ್ ಅವಾಸ್ತಿ ಅವರು ಯುವತಿಯ ಕುಟುಂಬವನ್ನು ಭೇಟಿ ಮಾಡಿ ಬಂದರು. ಘಟನೆ ನಡೆದ ಬೆನ್ನಲ್ಲೇ ರಚಿಸಲಾಗಿದ್ದ ವಿಶೇಷ ತನಿಖಾ ತಂಡ ತನ್ನ ವರದಿಯನ್ನ ಇವತ್ತು ಸಿಎಂಗೆ ಸಲ್ಲಿಸಿತು. ಇದಾದ ಬಳಿಕ ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ನಡೆಸಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.