



ಕುಂದಾಪುರ : ನಾಲ್ಕು ದಿನಗಳ ಹಿಂದೆ ಸಾವನಪ್ಪಿದ ತನ್ನ ತಾಯಿಯ ಮೃತದೇಹದ ಮುಂದೆ ಅನ್ನ ನೀರು ಇಲ್ಲದೆ ಇದ್ದ ವಿಶೇಷಚೇತನ ಮಗಳು ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಹೃದಯ ವಿದ್ರಾವಕ ಘಟನೆ ಮೂಡುಗೋಪಾಡಿಯ ದಾಸನಹಾಡಿಯಲ್ಲಿ ಎಂಬಲ್ಲಿ ನಡೆದಿದೆ.
ಗೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಗೋಪಾಡಿ ದಾಸನಹಾಡಿ ಎಂಬಲ್ಲಿನ ವಾಸವಿದ್ದ ಜಯಂತಿ ಶೆಟ್ಟಿ (62) ಎಂಬವರು ನಾಲ್ಕು ದಿನಗಳ ಹಿಂದೆ ಸಾವನಪ್ಪಿದ್ದಾರೆ. ಆದರೆ ತಾಯಿಯ ಶವ ಜೊತೆ ವಿಶೇಷಚೇತನ ಮಗಳು ನಾಲ್ಕು ದಿನ ಅನ್ನ ಆಹಾರ ಇಲ್ಲದೆ ಇದಿದ್ದು, ಸ್ಥಳೀಯರು ಬಂದು ನೋಡಿದಾಗ ಯುವತಿ ಪ್ರಜ್ಞೆ ಹೀನಳಾಗಿ ಬಿದ್ದಿದ್ದಳು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ತಾಯಿ ಜಯಂತಿ ಶೆಟ್ಟಿ (62) ಹಾಗೂ ಪುತ್ರಿ ಪ್ರಗತಿ ಶೆಟ್ಟಿ (32) ಮೃತರು.
ಮೂಲತಃ ಹೆಂಗವಳ್ಳಿಯವರಾದ ಈ ಕುಟುಂಬ ಕಳೆದ ಕೆಲವು ವರುಷಗಳಿಂದ ಮೂಡುಗೋಪಾಡಿಯಲ್ಲಿ ನೆಲೆಸಿದ್ದು ಜಯಂತಿಯವರ ಪತಿ ನಿಧನರಾದ ಬಳಿಕ ತಾಯಿ-ಮಗಳು ವಾಸವಿದ್ದರು. ಜಯಂತಿ ಶೆಟ್ಟಿಯವರ ಮಗಳು ಹುಟ್ಟಿನಿಂದಲೇ ಬುದ್ದಿಮಾಂಧ್ಯರಾಗಿದ್ದರು, ಅಲ್ಲದೆ ಇತ್ತೀಚೆಗೆ ಶುಗರ್ ಸಮಸ್ಯೆಯಿಂದ ಒಂದು ಕಾಲು ಕತ್ತರಿಸಲಾಗಿತ್ತು. ಸಂಕಷ್ಟದ ನಡುವೆ ತಾಯಿ ಮಗಳನ್ನು ಮುದ್ದಾಗಿ ಸಾಕಿ ಜೀವನ ನಡೆಸುತ್ತಿದ್ದರು. ಮಗಳಿಗಾಗಿ ಮೇ 12 ರಂದು ತಾಯಿ ಜಯಂತಿ ಶೆಟ್ಟಿ ಅವರು ಆನೆಗುಡ್ಡೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿದ್ದರು. ಬಳಿಕ ಮೇ 13 ರಂದು ಕೊಟೇಶ್ವರ ದೇವಸ್ಥಾವದಲ್ಲಿ ಪೂಜೆ ಮಾಡಲಿಕ್ಕೆ ಇದೆ ಎಂದು ಪರಿಚಯದ ಆಟೋ ಡ್ರೈವರ್ ಗೆ ಮಾಹಿತಿ ನೀಡಿದ್ದರು. ಇದರಂತೆ ಅಟೋ ಡ್ರೈವರ್ ಮೇ13 ರಂದು ದೇವಳಕ್ಕೆ ತೆರಳುವ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಗದೇ ಇದ್ದಾಗ ಚಾಲಕ ಸುಮ್ಮನಾಗಿದ್ದರು.
ಬಳಿಕ ಮೂರು ದಿನಗಳು ಕಳೆದರೂ ಕೂಡ ಗೇಟ್ ಸೇರಿದಂತೆ ಮನೆಯ ಹಿಂಭಾಗ ಮತ್ತು ಮುಂಭಾಗದ ಬಾಗಿಲುಗಳನ್ನು ಮುಚ್ಚಿಕೊಂಡಿದ್ದವು. ಹಾಗೂ ಮನೆಯ ಎಲ್ಲಾ ಕೊಠಡಿಗಳ ಲೈಟ್ಗಳು ಹಗಲಿನಲ್ಲಿಯೂ ಉರಿಯುತ್ತಿದ್ದದ್ದನ್ನು ಕಂಡು ಸ್ಥಳೀಯರು ಎಲ್ಲಿಗಾದರೂ ಹೋಗಿರಬಹುದು ಎಂದು ಸುಮ್ಮನಿದ್ದರು. ಈ ಸಂದರ್ಭ ಗುರುವಾರ ರಾತ್ರಿ ವೇಳೆ ಮನೆಯ ಸಮೀಪ ದುರ್ವಾಸನೆ ಬರುತ್ತಿದ್ದದ್ದನ್ನು ಗಮನಿಸಿದ ನೆರೆಹೊರೆಯವರು ಜಯಂತಿ ಶೆಟ್ಟಿ ಇವರ ಮೊಬೈಲ್ಗೆ ಕರೆ ಮಾಡಿದಾಗ ಮೊಬೈಲ್ ಮನೆಯಲ್ಲಿಯೇ ರಿಂಗ್ಗಣಿಸುತ್ತಿತ್ತು. ಆದರೆ ಕಾಲ್ ರಿಸಿವ್ ಮಾಡುತ್ತಿರಲಿಲ್ಲ. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯರು ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಇವರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಸುರೇಶ್ ಶೆಟ್ಟಿ ಸ್ಥಳೀಯರೊಂದಿಗೆ ಮನೆಯ ಸುತ್ತಮುತ್ತ ಹುಡುಕಾಡಿ ಕಿಟಕಿಯಲ್ಲಿ ನೋಡಿದಾಗ ಮಗಳು ಸಂಪೂರ್ಣ ನಿತ್ರಾಣಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿದ್ದ ದೃಶ್ಯ ಕಂಡು ಸ್ಥಳೀಯರು ದಂಗಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಉಪನಿರೀಕ್ಷಕ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಸಿಬ್ಬಂದಿಗಳು ಮನೆಯ ಬಾಗಿಲನ್ನು ಸ್ಥಳೀಯರ ಸಹಕಾರದಿಂದ ಮುರಿದು ಒಳಹೊಕ್ಕಿ ಯುವತಿಯನ್ನು ಪರಿಶೀಲಿಸಿದಾಗ ತೀವ್ರ ನಿತ್ರಾಣಗೊಂಡ ಸ್ಥಿತಿಯಲ್ಲಿದ್ದರು. ತಕ್ಷಣವೇ ಪಿಎಸ್ಐ ಯುವತಿಗೆ ಉಪಚರಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ್ದು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸಿದೆ ಪ್ರಗತಿ ಕೊನೆಯುಸಿರೆಳೆದಿದ್ದಾರೆ.