

ಆರೋಗ್ಯಕರವಾದ ಮನಸ್ಸು ಉತ್ತಮವಾದ ವಿಚಾರಗಳನ್ನು ಯೋಚಿಸುತ್ತದೆ, ಪ್ರೇರೇಪಿಸುತ್ತದೆ. ಮನಸ್ಸನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಇತರರ ವಿಷಯಗಳ ಕುರಿತು ಯೋಚಿಸುವುದು ಕೂಡ ಕೆಟ್ಟ ವಿಚಾರವೇ ಆಗಿರುತ್ತದೆ. ನಮ್ಮನ್ನು ನಾವು ಅರಿತುಕೊಳ್ಳುವ ಮುನ್ನ ಇತರರನ್ನು ಅರಿಯುವುದು ಅಸಾಧ್ಯ. ಹಾಗಾಗಿ ನಮ್ಮೊಳಗಿನ ಆತ್ಮನೊಂದಿಗೆ ಸದಾ ಸಂಪರ್ಕವನ್ನು ಸಾಧಿಸುತ್ತಿರಬೇಕು. ಹಣ್ಣಿನ ಮರದಲ್ಲಿ ಎಲ್ಲಾ ಹಣ್ಣುಗಳು ಒಂದೇ ತೆರನಾದ ರುಚಿ ಅಥವಾ ಮಾಧುರ್ಯವನ್ನು ಹೊಂದಿರುವುದಿಲ್ಲ. ಆಯಾಯ ಹಣ್ಣಿನ ಶ್ರೇಷ್ಠತೆ ಅದಕ್ಕಿದ್ದೇ ಇರುತ್ತದೆ. ನೋಡಿದಾಗ ಅದು ಹಾಗಿರಬಹುದು, ಹೀಗಿರಬಹುದು ಎಂದು ಭಾವಿಸಿಕೊಳ್ಳಬೇಕಷ್ಟೇ. ಅದನ್ನು ತೊಳೆದು ಬಾಯಿಗಿಟ್ಟು ರುಚಿ ನೋಡಿದಾಗ ಅದರ ಹೊರ ಮೇಲ್ಮೈ ಗಿಂತ ತಿರುಳು ಒಳ್ಳೆಯದಿದೆ ಅಥವಾ ಒಳ್ಳೆಯದಿಲ್ಲ ಎಂದು ಅರಿವಾಗುವುದು ನಮ್ಮೊಳಗಿನ ಆತ್ಮನಿಗೆ ತಲುಪಿದಾಗ ಮಾತ್ರ. ಹಾಗಾಗಿ ಇತರರ ವಿಚಾರಗಳ ಕುರಿತಾಗಿ ಕೆಟ್ಟದಾಗಿ ಮಾತಾಡುವುದು ಅಥವಾ ತೀರಾ ಹೊಗಳಿ ಮಾತಾಡುವುದು ಒಂಥರಾ ನಮ್ಮ ನಮ್ಮ ದುರ್ಬಲತೆಯೇ ಕಾರಣವೆನ್ನಬಹುದು. ಇನ್ನೊಬ್ಬರ ಕುರಿತು ಹಿಂದಿನಿಂದ ಹೊಗಳಿ ಅಥವಾ ತೆಗಳಿ ಅವರ ಬಗ್ಗೆಯೇ ಮತ್ತೊಬ್ಬರಲ್ಲಿ ಮಾತಾಡುವುದು ತಪ್ಪು. ನಾಲಿಗೆ ಹಾಗೂ ಮನಸ್ಸನ್ನು ನಮ್ಮದೇ ಪರಿಪಕ್ವತೆಗೆ ಬಳಸಿಕೊಳ್ಳಬೇಕು. ನಮ್ಮೊಳಗಿರುವ ಆತ್ಮನನ್ನು ದಿನದಿನವೂ ಗಮನಿಸುತ್ತಿರಬೇಕು. ಅಂದರೆ ಯಾವುದಾದರೂ ಕೆಲಸದ ಒತ್ತಡಗಳಿರುವಾಗಲೂ ಅಥವಾ ಬ್ಯುಸಿ ಶೆಡ್ಯೂಲ್ ನಲ್ಲಿದ್ದೇವೆ ಎನ್ನುತ್ತಾರೋ ಅವರಿಗೆ ಆಗೆಲ್ಲ ಆತ್ಮನ ಕುರಿತು ಯೋಚಿಸಲು ಸಾಧ್ಯವೇ ಆಗದು. ಹಾಗಾಗಿಯೇ “ಯೋಗ” ಎನ್ನುವ ಪದದ ಮೂಲಕ ನಮ್ಮತನವನ್ನು, ನಮ್ಮೊಳಗನ್ನು ದಿನವೂ ಪರೀಕ್ಷಿಸಿಕೊಳ್ಳಬಹುದು. ಯೋಗದ ಮೂಲಕ ಶರೀರಕ್ಕೆ ಬೇಕಾದ ವ್ಯಾಯಾಮ ದೊರೆಯುವುದು. ಅದೇ ರೀತಿ ಧ್ಯಾನದ ಮೂಲಕ ಅಂತರಂಗದ ಶರೀರಕ್ಕೆ ಚೈತನ್ಯ ಲಭಿಸುವುದು. ಹೊರಗಿನ ಶರೀರದ ಅಂದ ಚಂದಗಳನ್ನು ಪರಿಗಣಿಸಿದಾಗಲಷ್ಟೇ ಆರೋಗ್ಯವನ್ನು ಅಳೆಯಲಾಗದು. ಅಂತರಂಗದೊಳಗಿರುವ ಆನಂದವನ್ನು ಅನುಭವಿಸಲು ಯೋಗದ ಅರಿವು ಬರಬೇಕು. ಆಗ ಮಾತ್ರ ಮನಸ್ಸಿನ ಪರಿಪಕ್ವತೆಯಾಗಲು ಸಾಧ್ಯವಾಗುವುದು, ಮನಸ್ಸು ಪರಿಪಕ್ವಗೊಳ್ಳುವುದು. ಯಾರಿಗೂ ನೋವಾಗದ ರೀತಿಯಲ್ಲಿ, ಹಾನಿಯಾಗದ ರೀತಿಯಲ್ಲಿ ಬದುಕನ್ನು ಬಾಳಲು ಕಲಿಯಬೇಕು . ವರ್ಷದ 365 ದಿನಗಳೂ ಬೆಳಿಗ್ಗೆ ಎದ್ದ ಕೂಡಲೇ ಒಂದು ಲೀಟರ್ ಉಗುರು ಬಿಸಿ ನೀರನ್ನು ಕುಳಿತುಕೊಂಡು ಕುಡಿಯುವ ಕ್ರಮವನ್ನು ಅನುಸರಿಸುವುದು ಉತ್ತಮ. ಎದ್ದ ಕೂಡಲೇ ಚಹಾ ಅಥವಾ ಕಾಫಿ ಕುಡಿಯುವುದಲ್ಲ. ಹಾಗೆ ಸೇವಿಸಿದ ನೀರು ನಮ್ಮೊಳಗಿನ ಜಗತ್ತನ್ನು ಅನುದಿನವೂ ಶುಚಿಯಾಗಿರಿಸುವಂತೆ ಮಾಡುತ್ತದೆ. ಹಾಗಾದಾಗಲೇ ಹೊರಗಿನ ಸ್ವಚ್ಛತೆಯನ್ನು ನಾವು ಗಮನಿಸುತ್ತೇವೆ. ನಮ್ಮ ಶರೀರ ಹೇಗೆಯೋ ಅದೇ ರೀತಿ ಈ ಭೂಮಿ ಒಡಲು. ಅದನ್ನು ನಾವೆಲ್ಲರೂ ಸ್ವಚ್ಚವಾಗಿಟ್ಟುಕೊಳ್ಳಲೇಬೇಕು. ನಮ್ಮ ದೇಹಕ್ಕೆ ಒಳ್ಳೆಯ ಪೌಷ್ಟಿಕಾಂಶಗಳಿಂದ ಕೂಡಿದ ಆಹಾರವನ್ನು ಸೇವಿಸುತ್ತೇವೆ. ಹಾಗೆಯೇ ನಮ್ಮ ತಾಯಿ ಈ ಭೂಮಿ ನಮ್ಮನ್ನು ಹೊತ್ತ ಮಾತೆ. ಆಕೆಯನ್ನು ನಾವು ಒಳ್ಳೆಯ ರೀತಿಯಲ್ಲಿ ಹಸಿರಾಗಿಸಿ ಕಾಪಾಡಿಕೊಳ್ಳಬೇಕು. ಬೇಡದ ಕಸಗಳನ್ನು ಅಲ್ಲಲ್ಲಿ ಎಸೆಯುವ ಕಪಟತನವನ್ನು ಬಿಟ್ಟುಬಿಡಬೇಕು.
ಬದುಕಲ್ಲಿ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು. ಅದಕ್ಕೆ ಯೋಗವು ಬೇಕೇ ಬೇಕು. ಹಾಗಾಗಿ ಕೂಡಿಬಂದಿದೆ ಈಗ ಯೋಗಾನು ಯೋಗ. ಹೊತ್ತು ಇನ್ನೂ ಮೀರಿಲ್ಲ. ಯೋಗ ಜೀವನದಲ್ಲಿ ಆನಂದ ಕಾಣಲು ಸಾಧ್ಯವಿದೆ. ನಿನ್ನೆ ಬೆಳಿಗ್ಗೆ ನೀರು ಕುಡಿದಿಲ್ಲವಲ್ಲ ಎಂದು ಪರಿತಾಪ ಪಡದಿರಿ. ಇಂದಿನ ಬೆಳಗ್ಗಿನ ಬ್ರಾಹ್ಮಿ ಮುಹೂರ್ತವೇ ಸಕಾಲ. ಹೊತ್ತು ಮೀರಿಲ್ಲ. ಕಾಯುತ್ತಿದೆ ಎಲ್ಲರಿಗಾಗಿ. ನಮ್ಮೊಳಗನ್ನು ಸ್ವಚ್ಛವಾಗಿಡಲು, ಆನಂದ ಗೊಳಿಸಲು ಪ್ರಸಕ್ತ ಕಾಲ ಸನ್ಹಿಹಿತವಾಗಿದೆ. ಬದುಕೇಂದರೆ ಹೇಗೋ ಏನೋ ಎಂದು ಯೋಚಿಸುತ್ತಿರುವುದನ್ನು ಬಿಟ್ಟು ಬದುಕೆಂದರೆ ಹೀಗೇ ಎಂದು ಎದೆತಟ್ಟಿ ಕಲಿಯುವ ಅಥವಾ ಹೇಳುವ ಸುಯೋಗ ಬರುತ್ತಲಿದೆ. ಒಳಗಿನ ಪರಿಶುದ್ಧವಾದ ಭಾವನೆಗಳನ್ನು ತಲುಪಲು ಸಂಕಲ್ಪ ಮಾಡಿ. ಆಗ ಎಲ್ಲಾ ಕಡೆಯೂ ಸ್ವಚ್ಛತಾ ಮನೋಭಾವ ಮೂಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಂತಹ ಮನೋಭಾವ ಎಲ್ಲರೂ ಹೊಂದಿದ್ದೇ ಆದಲ್ಲಿ ಯಾರೂ ಯಾವುದೇ ಕಸವನ್ನು ತಮಗರಿವಿದ್ದೂ ಇಲ್ಲದವರಂತೆ ಮಾರ್ಗದ ಬದಿಗೋ ಚರಂಡಿಗೋ ಅಥವಾ ಹೊಳೆಗೋ ಖಂಡಿತಾ ಎಸೆಯಲಾರರು. ಅರಿವನ್ನು ತಿಳಿದಿರುವವರು ಅಂತಹ ಕೆಲಸ ಮಾಡುವವರೇ ಅಲ್ಲ!!! ಹಾಗೂ ಒಂದು ವೇಳೆ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವವರು ಶತ ಮೂರ್ಖರೆಂದು ಒಪ್ಪಿಕೊಂಡಂತೆಯೇ ಹೌದು.
ಬದುಕಿನ ಬುತ್ತಿಯಲ್ಲಿ ನಾವು ಆಯಾಯ ದಿನದ ಶ್ರೇಷ್ಠತೆಯನ್ನು ಅನುಭವಿಸಬೇಕು. ಹೊರತು ಹೊಲಸನ್ನಲ್ಲ. ದುಡಿಮೆಗೆ, ದೂರದೂರಿಗೆ, ಶಾಲೆ ಕಾಲೇಜುಗಳಿಗೆ ಹಾಗೂ ಯಾವುದೇ ಕೆಲಸ ಕಾರ್ಯ ಮಾಡುತ್ತಿರುವ ಸ್ಥಳಗಳಿಗೆ ಹೋಗುವಾಗ ಬುತ್ತಿ ಒಯ್ಯುವುದು ಸಹಜ. ಅದರಲ್ಲಿ ನಾವು ಸಂಸ್ಕಾರಯುತ ಆಹಾರವನ್ನೇ ಹಾಕುತ್ತೇವೆ. ಹಳಸಿದ ತಿಂಡಿ, ಅನ್ನ ಅಥವಾ ಆಹಾರ ಹಾಕುವುದಿಲ್ಲವಲ್ಲ. ಹಾಗಾಗಿ ಹಸಿದ ಹೊಟ್ಟೆಗೆ ಆ ಆಹಾರ ಔಷಧವಾಗಿರುತ್ತದೆ . ಅದೇ ರೀತಿ ನಾವು ಕಶ್ಮಲ, ಕೊಳೆ, ಪ್ಲಾಸ್ಟಿಕ್ ಗಳನ್ನು ಎಲ್ಲೆಂದರಲ್ಲಿ ಭೂಮಿಗೆ ಎಸೆದಾಗ ಅಥವಾ ಹಾಕಿದಾಗ ಅದು ಭೂಮಿಯ ಆರೋಗ್ಯಕ್ಕೆ ಕುತ್ತು ತರುತ್ತದೆ. ಭೂಮಿಯೊಡಲು ಅಪಾಯವಾದಾಗ ನಮ್ಮೊಡಲು ಉಳಿಯುವುದು ಸಾಧ್ಯವೇ? ಇಲ್ಲವಲ್ಲ. ಹಾಗಾಗಿ ಎಚ್ಚರಿಕೆಯ ಹೆಜ್ಜೆಯೊಂದು ನಮ್ಮಲ್ಲೇ ಬೆಳೆಯಬೇಕು. ಅದಕ್ಕೆ ಆರೋಗ್ಯಕರವಾದ ಮನಸ್ಸು ಇರಬೇಕು. ಬರೀ ಕನಸು ಕಾಣುವಂತದ್ದಲ್ಲ ಮನಸ್ಸು. ಅದು ಈ ದೇಹದೊಳಗೆ ಇರುವುದು. ಹಾಗಾಗಿ ದೇಹವೂ ಆರೋಗ್ಯಕರವಾಗಿರಬೇಕು. ಅದಕ್ಕೆ ಯೋಗ ಭಾಗ್ಯ ಬೇಕಲ್ಲ ಎಂದು ಅದೃಷ್ಟ ನಂಬುವವರು ಹೆಚ್ಚು. ಆ ಯೋಗ ಭಾಗ್ಯ ಇದೀಗ ಮನೆ ಬಾಗಿಲಲ್ಲೇ ಕಾದು ಕುಳಿತಿದೆ. ಬಾಗಿಲು ತೆರೆದು ಬರಿಸಬೇಕಾಗಿದೆ ಅಷ್ಟೇ. ಯೋಗವೆಂಬ ಅತಿಥಿ ನಮ್ಮ ಬಳಿ ಸದಾ ಲವಲವಿಕೆಯನ್ನು ಉಂಟುಮಾಡುತ್ತದೆ. ಹಾಗಾಗಿ ಅತಿಥಿಯನ್ನು ಬರಮಾಡಿಕೊಳ್ಳಿ. ಅನುದಿನವೂ ಅತಿಥಿಯನ್ನು ಅನುಸರಿಸುತ್ತಿರಿ. ಆಗ ಆ ಅತಿಥಿ ಸದಾ ನಮ್ಮೊಟ್ಟಿಗೆ ಇದ್ದು ಸಕಲ ಕಾರ್ಯಗಳಿಗೂ ಉನ್ನತವಾದ ಸಂಸ್ಕಾರಯುಕ್ತ ಭಾವನೆಗಳನ್ನು ಬೆಳೆಸಿ ಕೊಡುವಲ್ಲಿ ಸಹಕಾರಿಯಾಗಿರುತ್ತಾನೆ. ಯೋಗವೆಂಬ ಜ್ಞಾನದೀಪ ನಮ್ಮ ಅಂತರಂಗವನ್ನು ಸದಾ ಬೆಳಗಿಸುತ್ತದೆ ಅಥವಾ ಬೆಳಗುವಂತೆ ಮಾಡುತ್ತದೆ. ಇದು ಉತ್ಪ್ರೇಕ್ಷೆಯ ಮಾತಲ್ಲ. ಒಂದೆರಡು ದಿನ ಯೋಗ ಮಾಡಿ ಬಿಡುವುದು ಯೋಗ ಸಾಧನೆ ಯಾಗದು. ಒಂದೆರಡು ದಿನ ಊಟ ಅಥವಾ ನಿದ್ದೆ ಮಾಡಿ ಬಿಡುವುದಿಲ್ಲವಲ್ಲ!! ನಾವಿರುವಷ್ಟು ದಿನ ಈ ಭೂಮಿಯೊಡನಾಟದಲ್ಲಿ ಭೂಮಿಗೆ ಹಾನಿಯಾಗದಂತೆ ನೋಡಿಕೊಳ್ಳುವ ಭಾಗ್ಯ ನಮ್ಮದಾಗಬೇಕು ಅದು ನಮ್ಮ ಆದ್ಯ ಕರ್ತವ್ಯ. ಅಂತಹ ಮನಸ್ಥಿತಿಗೆ ಇಂದೇ ಯೋಗ ಭಾಗ್ಯದ ಬಾಗಿಲನ್ನು ತೆಗೆದಿರಿಸಿಕೊಳ್ಳೋಣ. ಇಂದು ಬ್ರಾಹ್ಮೀ ಮುಹೂರ್ತಕ್ಕೆ ಸಿದ್ಧರಾಗೋಣ. ಅವರವರ ಸುಖ ಸಂತೋಷಕ್ಕಾಗಿ ಕೋಟಿ ಕೋಟಿ ರೂಪಾಯಿ ಮೌಲ್ಯದ “ಯೋಗ” “ಧ್ಯಾನ” ವೆಂಬ ನಿಧಿಯನ್ನು ಇಂದೇ ತಮ್ಮದಾಗಿಸಿಕೊಳ್ಳಲು ತಯಾರಾಗಿ ಜೀವನವನ್ನು ಹಗುರವಾಗಿಸಿಕೊಳ್ಳೋಣ. ಯೋಗೇನ ಚಿತ್ತಸ್ಯ ಪದೇ ನವಾಚಾ…..
✍🏻 ಮಲ್ಲಿಕಾ ಜೆ ಆರ್ ರೈ ಪುತ್ತೂರು
ಅಧ್ಯಕ್ಷರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲಿಜನ್.