Saturday, June 28, 2025
spot_imgspot_img
spot_imgspot_img

ಬೆಂಗಳೂರು – ಮಂಗಳೂರು ನಡುವೆ 4 ಗಂಟೆಯಷ್ಟೇ ಸಂಚಾರವಿರುವ ಎಕ್ಸ್‌ಪ್ರೆಸ್‌ ವೇ ನಿರ್ಮಾಣಕ್ಕೆ ಕೇಂದ್ರ ಸಜ್ಜು..!

- Advertisement -
- Advertisement -

ಬೆಂಗಳೂರು : ಬೆಂಗಳೂರು – ಮಂಗಳೂರು ನಡುವೆ ವೇಗದ ಸಂಚಾರಕ್ಕೆ ಹೊಸ ಎಕ್ಸ್‌ಪ್ರೆಸ್‌ ವೇ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಹೊಸ ಗ್ರೀನ್‌ ಫೀಲ್ಡ್‌ ಹೆದ್ದಾರಿಯಲ್ಲಿ ಕೇವಲ 4 ಗಂಟೆಗಳಲ್ಲಿ ಬೆಂಗಳೂರಿನಿಂದ ಮಂಗಳೂರು ತಲುಪಬಹುದು!ಹೌದು, ಬೆಂಗಳೂರು – ಮಂಗಳೂರು ನಡುವಿನ ಎಕ್ಸ್‌ಪ್ರೆಸ್‌ ವೇ ಯೋಜನೆಗೆ ಮತ್ತೆ ಜೀವ ಬಂದಿದೆ. ಈ ಯೋಜನೆ ಘೋಷಿಸಿ ಹಲವು ವರ್ಷಗಳ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಕೇಂದ್ರ ಸರ್ಕಾರವು ತಜ್ಞ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದೆ. ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆ ಸಂಸ್ಥೆಯೊಂದಕ್ಕೆ ಡಿಪಿಆರ್‌ ತಯಾರಿಸಲು ಗುತ್ತಿಗೆ ನೀಡಿದೆ ಎಂಬ ವಿಷಯವನ್ನು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟಾ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. (ಕರ್ನಾಟಕಕ್ಕೆ 2 ಹೊಸ ವಿಮಾನ ನಿಲ್ದಾಣಗಳು)335 ಕಿಮೀ ಉದ್ದದ ಗ್ರೀನ್‌ಫೀಲ್ಡ್‌ ಹೆದ್ದಾರಿ ಯೋಜನೆ ಇದಾಗಿದ್ದು, 4 ರಿಂದ 8 ಪಥದ ಅಕ್ಸೆಸ್‌ಡ್‌ ಕಂಟ್ರೋಲ್‌ ಹೆದ್ದಾರಿ ನಿರ್ಮಾಣವಾಗಲಿದೆ. ಬೆಂಗಳೂರು ಹಾಗೂ ಮೈಸೂರಿನ ನಡುವೆ ಇರುವ ಎಕ್ಸ್‌ಪ್ರೆಸ್‌ವೇ ರೀತಿಯಲ್ಲಿಯೇ ಈ ಬೆಂಗಳೂರು – ಮಂಗಳೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣವಾಗುವ ಸಾಧ್ಯತೆ ಇದೆ. ಈ ಯೋಜನೆ ಸಾಕಾರಗೊಂಡರೆ ಸದ್ಯ ಇರುವ ಪ್ರಯಾಣದ ಅವಧಿಯು ಅರ್ಧದಷ್ಟು ತಗ್ಗಲಿದೆ.ಶಿರಾಡಿಯಲ್ಲಿ ರಸ್ತೆ, ರೈಲ್ವೇ ಎರಡೂ ಒಂದೇ ಕಡೆ?ಈ ಹಿಂದೆ ಡಿಪಿಆರ್‌ ತಯಾರಿಸಲು ಒಂಬತ್ತು ಸಂಸ್ಥೆಗಳು ಬಿಡ್‌ ಅನ್ನು ಸಲ್ಲಿಸಿದ್ದವು. ಅದರಲ್ಲಿ ಒಂದು ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, 2026ರ ಅಂತ್ಯದ ವೇಳೆಗೆ ಡಿಪಿಆರ್‌ ಸಿದ್ಧವಾಗಲಿದೆ. ಈ ವರ್ಷದ ಏಪ್ರಿಲ್‌ 30ರಿಂದಲೇ ಡಿಪಿಆರ್‌ ತಯಾರಿಕೆ ಪ್ರಕ್ರಿಯೆ ಶುರುವಾಗಿದೆ. ಡಿಪಿಆರ್ ವರದಿ ಸಿದ್ಧವಾಗಿ, ಸಲ್ಲಿಕೆಯಾಗಿ, ಅಂತಿಮಗೊಂಡ ಬಳಿಕ ಭೂಸ್ವಾಧೀನ ಮತ್ತು ಪರಿಸರ ಅನುಮೋದನೆಗಳಂತಹ ಪ್ರಕ್ರಿಯೆಗಳು ಶುರುವಾಗುತ್ತವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಹೆದ್ದಾರಿ ನಿರ್ಮಾಣ ಕಾಮಗಾರಿ 2028ರ ನಂತರ ಪ್ರಾರಂಭವಾಗುವ ನಿರೀಕ್ಷೆಯಿದೆ. ಅದಲ್ಲದೇ ರೈಲ್ವೇ ಇಲಾಖೆ ಕೂಡ ಶಿರಾಡಿ ಘಾಟ್‌ನಲ್ಲಿ ರೈಲ್ವೇ ಮಾರ್ಗಕ್ಕೆ ಡಿಪಿಆರ್‌ ತಯಾರಿಸುತ್ತಿದೆ. ಆದ್ದರಿಂದ ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಶಿರಾಡಿ ಘಾಟ್‌ನಲ್ಲಿ ರಸ್ತೆ ಮತ್ತು ರೈಲು ಮಾರ್ಗವನ್ನು ಸಮಾನಾಂತರವಾಗಿ ಅಭಿವೃದ್ಧಿಪಡಿಸಬೇಕಿರುವ ಅಗತ್ಯ ಇದೆ ಎನ್ನಲಾಗಿದೆ. ಇದಕ್ಕಾಗಿ ರೈಲ್ವೇ ಮಂಡಳಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಂಟಿ ಸಮಿತಿಯನ್ನು ರಚಿಸುವಂತೆ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟಾ ಮನವಿ ಮಾಡಿದ್ದಾರೆ.ಹೇಗಿರುತ್ತೆ ಬೆಂಗಳೂರು – ಮಂಗಳೂರು ಎಕ್ಸ್‌ಪ್ರೆಸ್‌ ವೇ?ಉದ್ದ : 335 ಕಿಮೀಸಮಯ : 4 ಗಂಟೆಮಾರ್ಗ : ಬೆಂಗಳೂರು, ಕುಣಿಗಲ್‌, ಹಾಸನ, ಸಕಲೇಶಪುರ, ಬಂಟ್ವಾಳ, ಮಂಗಳೂರುಹೆದ್ದಾರಿ ವಿಧ : ಪ್ರವೇಶ ನಿಯಂತ್ರಿತ, ಎಂಟ್ರಿ, ಎಕ್ಸಿಟ್‌ ಪಾಯಿಂಟ್‌ಹೊಸ/ ಹಳೇ : ಸಂಪೂರ್ಣ ಗ್ರೀನ್‌ ಫೀಲ್ಡ್‌ ಹೆದ್ದಾರಿಎಷ್ಟು ಪಥ : 4 ರಿಂದ 8 ಪಥಖರ್ಚು : 20 ರಿಂದ 25,000 ಕೋಟಿ ರೂ. (ಅಂದಾಜು)ಬೆಂಗಳೂರು ಮಂಗಳೂರು ಎಕ್ಸ್‌ಪ್ರೆಸ್‌ ವೇ ಮಾರ್ಗ ಎಲ್ಲೆಲ್ಲಿ?ಈ ಎಕ್ಸ್‌ಪ್ರೆಸ್‌ವೇ ಸುಮಾರು 335 ಕಿಲೋ ಮೀಟರ್ ಉದ್ದವಿರಲಿದ್ದು, ಬೆಂಗಳೂರಿನಿಂದ ಮಂಗಳೂರನ್ನು ತಲುಪಲು 3 ರಿಂದ 4 ಗಂಟೆ ಸಾಕು. ಬೆಂಗಳೂರು, ಕುಣಿಗಲ್‌, ಹಾಸನ, ಸಕಲೇಶಪುರ ಮತ್ತು ಬಂಟ್ವಾಳದ ಮೂಲಕ ಹಾದು ಮಂಗಳೂರನ್ನು ತಲುಪಲಿದೆ. ಅದಲ್ಲದೇ ಈ ಮಾರ್ಗವು ಪಶ್ಚಿಮ ಘಟ್ಟಗಳ ವಿಶೇಷವಾಗಿ ಹಾಸನದ ಬಳಿಯ ಸುಬ್ರಹ್ಮಣ್ಯ ಘಾಟ್ ವಿಭಾಗದ ಮೂಲಕ ಹಾದುಹೋಗಲಿದೆ. ಈ ಹೆದ್ದಾರಿ ಬೆಂಗಳೂರ – ಮೈಸೂರು ಎಕ್ಸ್‌ಪ್ರೆಸ್‌ವೇನಂತೆ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ ವೇ ಇದಾಗಿದ್ದು, ಕೆಲವು ಕಡೆ ಎಂಟ್ರಿ, ಎಕ್ಸಿಟ್‌ ಪಾಯಿಂಟ್‌ಗಳು ಇರಲಿವೆ. ಸಂಪೂರ್ಣ ಹೊಸದಾದ ಗ್ರೀನ್‌ಫೀಲ್ಡ್‌ ಹೆದ್ದಾರಿ ಇದಾಗಿದ್ದು, 4 ರಿಂದ 8 ಪಥ ಹೊಂದಿರಲಿದೆ. 20 ರಿಂದ 25 ಸಾವಿರ ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಹೇಳಲಾಗುತ್ತಿದ್ದು, ನಿಖರ ಯೋಜನಾ ಮೊತ್ತವನ್ನು ಇನ್ನು ಅಂದಾಜಿಸಿಲ್ಲ.ಬೆಂಗಳೂರು – ಮಂಗಳೂರು ಎಕ್ಸ್‌ಪ್ರೆಸ್‌ವೇ ಏಕೆ ಬೇಕು?ಪ್ರಯಾಣದ ಸಮಯ ಕಡಿತವಾಗಲಿದೆ.ದಕ್ಷಿಣ ಕರ್ನಾಟಕದ ಆರ್ಥಿಕ ಅಭಿವೃದ್ಧಿಯಾಗಲಿದೆ.ಬಂದರು ಸಂಪರ್ಕ ಹೆಚ್ಚಲಿದೆ.ರಸ್ತೆ ಸುರಕ್ಷತೆ ಮತ್ತು ಎಲ್ಲ ಹವಾಮಾನಕ್ಕೆ ಅನುಕೂಲ.ವಾಹನ ದಟ್ಟಣೆ ಕಡಿಮೆಯಾಗಲಿದೆಕೈಗಾರಿಕೆ ಮತ್ತು ಕೃಷಿಗೆ ಅನುಕೂಲವಾಗಲಿದೆ.ಪ್ರವಾಸೋದ್ಯಮಕ್ಕೆ ದೊಡ್ಡ ಬಲ ಸಿಗಲಿದೆ.ಮಧ್ಯಮ ಗಾತ್ರದ ನಗರಗಳ ಪ್ರಗತಿಯಾಗಲಿದೆ.ಈ ಹೆದ್ದಾರಿಯಿಂದ ಬೆಂಗಳೂರಿನ ಐಟಿ-ಬಿಟಿ ಮತ್ತು ಕೈಗಾರಿಕಾ ಉತ್ಪನ್ನಗಳು ಸುಲಭವಾಗಿ ನವಮಂಗಳೂರು ಬಂದರಿಗೆ ತಲುಪಲು ಸಾಧ್ಯವಾಗುತ್ತದೆ. ಅದೇ ರೀತಿ, ಮಲೆನಾಡು ಮತ್ತು ಕರಾವಳಿ ಪ್ರದೇಶದ ಕೃಷಿ ಉತ್ಪನ್ನಗಳಾದ ಕಾಫಿ, ಅಡಿಕೆ, ಗೇರುಬೀಜ ಮತ್ತು ಮೀನುಗಾರಿಕಾ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ಸಿಗಲಿದೆ. ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಕರಾವಳಿಯ ಬೀಚ್‌ಗಳು ಮತ್ತು ಪಶ್ಚಿಮ ಘಟ್ಟಗಳ ಪರಿಸರ ಪ್ರವಾಸೋದ್ಯಮ ಕೂಡ ದೊಡ್ಡ ಪ್ರಮಾಣದಲ್ಲಿ ಬೆಳೆಯಲಿದೆ. ಹೆದ್ದಾರಿ ಹಾದುಹೋಗುವ ಹಾಸನ, ಸಕಲೇಶಪುರ, ಬಂಟ್ವಾಳದಂತಹ ಸಣ್ಣ ಮತ್ತು ಮಧ್ಯಮ ಗಾತ್ರದ ಪಟ್ಟಣಗಳು ವೇಗವಾಗಿ ಅಭಿವೃದ್ಧಿ ಕಾಣಲಿವೆ. ಇದು ವಸತಿ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಬೇಡಿಕೆಯನ್ನು ಹೆಚ್ಚಿಸಲಿದೆ.ಮಳೆಗಾಲದಲ್ಲಿ ಬಂದ್‌ ಆಗುವ ಶಿರಾಡಿ ಘಾಟ್‌ ಸಮಸ್ಯೆಗೆ ಪರಿಹಾರಬೆಂಗಳೂರು – ಮಂಗಳೂರು ಎಕ್ಸ್‌ಪ್ರೆಸ್‌ ವೇ ಯೋಜನೆಯ ಅಗತ್ಯ ಏನು ಎಂಬುದನ್ನು ನೋಡುವುದಾದರೆ, ಬೆಂಗಳೂರು ಮತ್ತು ಮಂಗಳೂರು ನಡುವೆ ಸುಗಮ ಸಂಪರ್ಕದ ಬೇಡಿಕೆ ಹಲವು ದಶಕಗಳಿಂದ ಇದೆ. ವಿಶೇಷವಾಗಿ, ಮಳೆಗಾಲದಲ್ಲಿ ಪದೇ ಪದೇ ಭೂಕುಸಿತದಿಂದ ಮುಚ್ಚಿಹೋಗುವ ಶಿರಾಡಿ ಘಾಟ್ ರಸ್ತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಬಹಳ ಹಿಂದಿನಿಂದಲೂ ನಡೆಯುತ್ತಿವೆ. ಶಿರಾಡಿ ಘಾಟ್‌ ಬಂದ್‌ ಆಗುವುದು ಭಾರೀ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದು, ಆರ್ಥಿಕ ಚಟುವಟಿಕೆಗೆ ಬ್ರೇಕ್‌ ಬೀಳುತ್ತಿದೆ. ಹಿಂದೆ, ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ ಸಹಯೋಗದೊಂದಿಗೆ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾಪವಿತ್ತು. ಆದರೆ, ಅದರ ಅಗಾಧ ವೆಚ್ಚ ಮತ್ತು ಪರಿಸರ ಸಂಬಂಧಿತ ಕಾಳಜಿಗಳಿಂದಾಗಿ ಅದು ಕಾರ್ಯಸಾಧುವಲ್ಲ ಎನ್ನಲಾಗಿದೆ. ಆದರೂ ಸುರಂಗ ಮಾರ್ಗಕ್ಕೆ ಡಿಪಿಆರ್‌ ರೆಡಿಯಾಗಿದೆ. ಆದರೆ, ಈಗ ಪ್ರಸ್ತಾಪಿಸಲಾಗಿರುವುದು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಆಗಿರುವುದರಿಂದ ಹಳೇಯ ರಸ್ತೆಗೂ ಇದಕ್ಕೂ ಸಂಬಂಧವಿಲ್ಲ. ಹೊಸದಾಗಿ ನಿರ್ಮಾಣಗೊಳ್ಳಲಿದ್ದು, ಹಳೆಯ ಎಲ್ಲ ಪ್ರಸ್ತಾಪಗಳಿಗಿಂತ ಹೆಚ್ಚು ಮಹತ್ವಾಕಾಂಕ್ಷೆ ಹೊಂದಿದ ಯೋಜನೆಯಾಗಿದೆ. ಇದು ಹೊಸ ಆರ್ಥಿಕ ಕಾರಿಡಾರ್‌ ನಿರ್ಮಿಸುವ ನಿರೀಕ್ಷೆ ಇದ್ದು, ಸಿಲಿಕಾನ್‌ ಸಿಟಿ ಬೆಂಗಳೂರನ್ನು ಬಂದರು ನಗರಿ ಮಂಗಳೂರಿಗೆ ವೇಗದ ಸಂಪರ್ಕವನ್ನು ನೀಡಲಿದೆ.ಸಿಗುತ್ತಾ ಪರಿಸರ ಮತ್ತು ಅರಣ್ಯ ಇಲಾಖೆಯ ಒಪ್ಪಿಗೆ? ತಾಂತ್ರಿಕ ಸವಾಲು ಏನು?ಈ ಯೋಜನೆಗೆ ಹಲವು ಸವಾಲುಗಳು ಎದುರಾಗಲಿವೆ ಪ್ರಮುಖವಾಗಿದೆ. ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಬೇಕಿದೆ. ಈ ಹೆದ್ದಾರಿಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರದ ಮೂಲಕ ಹಾದುಹೋಗುತ್ತದೆ. ಸಾವಿರಾರು ಮರಗಳನ್ನು ಕಡಿಯಬೇಕಾಗಬಹುದು ಮತ್ತು ಇದು ವನ್ಯಜೀವಿಗಳ ಆವಾಸಸ್ಥಾನದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅನುಮತಿ ಪಡೆಯುವುದೇ ದೊಡ್ಡ ಸವಾಲಾಗಲಿದೆ. ಅದಲ್ಲದೇ ಇದು ಗ್ರೀನ್‌ಫೀಲ್ಡ್ ಯೋಜನೆಯಾಗಿರುವುದರಿಂದ, ನೂರಾರು ಕಿಲೋಮೀಟರ್ ಉದ್ದಕ್ಕೆ ಹೊಸದಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಇದು ಸಾವಿರಾರು ರೈತರು ಮತ್ತು ಭೂಮಾಲೀಕರ ಮೇಲೆ ಪರಿಣಾಮ ಬೀರುತ್ತದೆ. ಅವರಿಗೆ ಯೋಗ್ಯ ಪರಿಹಾರ ನೀಡಬೇಕಿದೆ. ಅವರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಪಶ್ಚಿಮ ಘಟ್ಟಗಳಂತಹ ಗುಡ್ಡಗಾಡು ಮತ್ತು ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸುರಂಗಗಳು, ಎತ್ತರದ ಸೇತುವೆಗಳು ಮತ್ತು ವೈಡಕ್ಟ್‌ಗಳನ್ನು ನಿರ್ಮಿಸುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾಗಿದೆ. ಇದಕ್ಕೆ ಅಪಾರ ಪ್ರಮಾಣದ ಹಣ ಬೇಕಾಗುತ್ತದೆ. ಯೋಜನೆಯ ವೆಚ್ಚ ಅಂದಾಜಿಗಿಂತಲೂ ಹೆಚ್ಚಾಗುವ ನಿರೀಕ್ಷೆ ಇದೆ.

- Advertisement -

Related news

error: Content is protected !!