


ಕಾರವಾರ: ಭಾರಿ ಮಳೆಯ ಪರಿಣಾಮ ಇಂದು ಬೆಳಗಿನ ಜಾವ 8-45 ಕ್ಕೆ ಅಂಕೋಲಾ ತಾಲೂಕಿನ ಶಿರೂರು ಬಳಿಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಹಿತಿ ನೀಡಿದ್ದಾರೆ. ಕಾರಾವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7 ಮಂದಿ ಗುಡ್ಡ ಕುಸಿತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದರು.
ಮಣ್ಣಿನಡಿ ಸಿಲುಕಿದ ಏಳು ಜನರ ಪೈಕಿ ಶಾಂತಾ ನಾಯ್ಕ ಎಂಬ ಮಹಿಳೆಯ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಇದ್ದ ಟೀ ಸ್ಟಾಲ್ ಹಾಗೂ ಮನೆಯ ಮೇಲೆ ಅಪಾರ ಪ್ರಮಾಣದ ಮಣ್ಣು ಬಿದ್ದು, ಚಹಾ ಅಂಗಡಿಯಲ್ಲಿ ಇದ್ದ ಏಳು ಜನ ಮಣ್ಣಿನ ಅಡಿ ಸಿಲುಕಿದ್ದಾರೆ ಎನ್ನಲಾಗಿದೆ.
ಗುಡ್ಡದ ಪಕ್ಕ ನಿಂತಿದ್ದ ಒಂದು ಲಾರಿ, ಒಂದು ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದೆ. ಗುಡ್ಡ ಕುಸಿದ ಮಣ್ಣಿನಡಿ ಜಗನ್ನಾಥ (55), ಲಕ್ಷ್ಮಣ ನಾಯ್ಕ(47), ಶಾಂತಿ ನಾಯ್ಕ, ಮಕ್ಕಳಾದ ರೋಶನ್, ಅವಂತಿಕಾ ಇದ್ದರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕುಮಟಾ ಅಂಕೋಲಾ ಮಧ್ಯೆ ರಸ್ತೆ ಸಂಚಾರ ಸ್ಥಗಿತವಾಗಿದೆ.