

ವಿಧವೆ ಹಾಗೂ ಮದುವೆಯಾಗದ ಮಧ್ಯ ವಯಸ್ಸಿನ ಮಹಿಳೆಯರನ್ನು ನಂಬಿಸಿ ಮದುವೆಯಾಗಿ ಹಣ ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಿದ್ದ ಖತರ್ನಾಕ್ ಆರೋಪಿಯನ್ನು ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈವರೆಗೂ ಈತ 15 ಮಹಿಳೆಯರಿಗೆ ಈ ರೀತಿ ವಂಚಿಸಿರುವ ಮಾಹಿತಿ ಸಿಕ್ಕಿದೆ.
ಬೆಂಗಳೂರಿನ ಬನಶಂಕರಿ 3ನೇ ಹಂತ ಹೊಸಕೆರೆಹಳ್ಳಿ ಕಾಳಿದಾಸನಗರ ನಿವಾಸಿ ಬಸವೇಗೌಡ ಎಂಬವರ ಪುತ್ರ ಕೆ.ಬಿ.ಮಹೇಶ್ (35) ಬಂಧಿತ ಆರೋಪಿ. ಈತನಿಂದ 2 ಲಕ್ಷ ನಗದು, 2 ಕಾರು, ಒಂದು ಬ್ರೇಸ್ಲೈಟ್, ಒಂದು ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಾದಿ.ಕಾಂ ಮೂಲಕ ಹೇಮಲತಾರನ್ನು ಸಂಪರ್ಕಿಸಿದ ಮಹೇಶ್ ತಾನು ಡಾಕ್ಟರ್ ಎಂದು ಹೇಳಿಕೊಂಡು ಮೈಸೂರಿನ ಆರ್.ಟಿ.ನಗರದಲ್ಲಿರುವ ಮನೆ ತೋರಿಸಿ ನಂಬಿಸಿದ್ದಾನೆ. ಈತನ ಮಾತು ನಂಬಿದ ಹೇಮಲತಾ ಜ.28ರಂದು ವಿಶಾಖಪಟ್ಟಣದಲ್ಲಿ ಮದುವೆಯಾಗಿದ್ದಾರೆ. ನಂತರ ಮೈಸೂರಿನ ಮನೆಗೆ ಬಂದು ನೆಲೆಸಿದ್ದರು. ಈ ವೇಳೆ ವಿಜಯನಗರ 4ನೇ ಹಂತದಲ್ಲಿ ತಾನು ಕ್ಲಿನಿಕ್ ಓಪನ್ ಮಾಡಬೇಕೆಂದು ಕಾರಣ ನೀಡಿ 70 ಲಕ್ಷ ಸಾಲ ತೆಗೆದುಕೊಡುವಂತೆ ಒತ್ತಡ ಹೇರಿದ್ದು, ಹಣ ಕೊಡಲು ಹೇಮಲತಾ ಒಪ್ಪದೇ ಇದ್ದಾಗ ಕೊಲೆ ಬೆದರಿಕೆ ಹಾಕಿದ್ದಾನೆ.
ನಂತರ ಹೇಮಲತಾ ಅವರು ಮನೆಯಲ್ಲಿ ಇಲ್ಲದಿದ್ದಾಗ 15 ಲಕ್ಷ ಹಾಗೂ 20 ಗ್ರಾಂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ. ಕೆಲವೇ ದಿನಗಳಲ್ಲಿ ಬೆಂಗಳೂರಿನ ದಿವ್ಯಾ ಎಂಬವರು ಹೇಮಲತಾರ ಮನೆಗೆ ಬಂದು ತನ್ನನ್ನೂ ಮಹೇಶ್ ಮದುವೆ ಆಗಿದ್ದಾರೆಂದು ಮಾಹಿತಿ ತಿಳಿಸಿದ್ದಾರೆ. ಇದಾದ ನಂತರ ಮಹೇಶ್ ವಿರುದ್ಧ ಹೇಮಲತಾ ಕುವೆಂಪುನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿ ಮಹೇಶ್ನನ್ನು ಬಂಧಿಸಿದ್ದಾರೆ. ಆರೋಪಿ ವಿಚಾರಣೆ ವೇಳೆ ತಾನು ಡಾಕ್ಟರ್, ಎಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಎಂದು ಹೇಳಿಕೊಂಡು 15 ಮಹಿಳೆಯರಿಗೆ ವಂಚಿಸಿರುವುದಾಗಿ ಹೇಳಿದ್ದಾನೆ.