


ಹಿಂದೂಗಳ ಮನೆ ಮೇಲೆ ನೆರೆಯ ಬಾಂಗ್ಲಾದೇಶದಲ್ಲಿ ಈಗ ಹಿಂಸಾತ್ಮಕ ದಾಳಿ ಆರಂಭ ಆಗಿದ್ದು ಹಿಂದೂಗಳ ಹತ್ಯೆಗೂ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಇದೀಗ ದೇಶ ಬಿಟ್ಟು ಓಡಿ ಬಂದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಈ ಸಮಯದಲ್ಲೇ ಧಗಧಗ ಹೊತ್ತಿ ಉರಿಯುತ್ತಿರುವ ಬಾಂಗ್ಲಾದೇಶದಲ್ಲಿ, ಹಿಂದೂಗಳ ಮನೆ ಮೇಲೆ ಹಿಂಸಾತ್ಮಕ ದಾಳಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಾಂಗ್ಲಾದೇಶ ಇವತ್ತು ಸ್ವಾತಂತ್ರ್ಯ ಪಡೆದು ನೆಮ್ಮದಿಯಾಗಿ ಸ್ವತಂತ್ರ ದೇಶವಾಗಿ ಜೀವನವನ್ನು ನಡೆಸುತ್ತಿದೆ ಎಂದರೆ ಅದಕ್ಕೆ ಕಾರಣ ಭಾರತ. ಆದರೆ ಭಾರತದ ಜೊತೆಗೆ ಅಲ್ಲಿನ ಜನ ಈಗ ಕಿರಿಕ್ ತೆಗೆಯುತ್ತಿದ್ದಾರೆ. 1971ರ ಬಾಂಗ್ಲಾ ವಿಮೋಚನೆ ಹೋರಾಟಕ್ಕೆ ಇಂದಿರಾ ಗಾಂಧಿಯವರ ಬೆಂಬಲ ಸಿಗದೇ ಇದ್ದಿದ್ದರೆ ಪಾಕಿಸ್ತಾನದ ಕಪಿಮುಷ್ಠಿಯಿಂದ ಬಾಂಗ್ಲಾದೇಶಕ್ಕೆ ಬಿಡುಗಡೆಯೇ ಸಿಗುತ್ತಿರಲಿಲ್ಲ. ಆದರೂ, ಇದೀಗ ಆಂತರಿಕ ಕಿತ್ತಾಟದಲ್ಲಿ ಮುಳುಗಿರುವ ಬಾಂಗ್ಲಾ ದೇಶದಲ್ಲಿ, ಹಿಂದೂಗಳ ಮನೆಗಳನ್ನ ಬೇಕು ಅಂತಲೇ ಟಾರ್ಗೆಟ್ ಮಾಡಿ ಬೆಂಕಿ ಹಚ್ಚಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಬಾಂಗ್ಲಾದಲ್ಲಿ ಹಿಂದೂಗಳ ಮನೆಗಳ ಮೇಲೆ ಹಿಂಸಾತ್ಮಕ ದಾಳಿ ನಡೆಯುವಾಗಲೇ ಜನಗಳು ಕೂಡ ಓಡಿ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿಂದೂಗಳಿಗೆ ಭದ್ರತೆ ಇಲ್ವಾ? ಎಂಬ ಪ್ರಶ್ನೆಯನ್ನ ಜನ ಕೇಳುತ್ತಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಓಡಿ ಬಂದ ನಂತರ, ಬಾಂಗ್ಲಾದೇಶ ಸೇನೆ ಇದೀಗ ಆಡಳಿತ ನಡೆಸಲು ಎಲ್ಲ ಸಿದ್ಧತೆ ಆರಂಭಿಸಿದೆ. ಹೀಗಿದ್ದರೂ ಬಾಂಗ್ಲಾದಲ್ಲಿ ಹಿಂದೂಗಳ ಮನೆಗಳ ಮೇಲೆ ಕಿರಾತಕರು ದಾಳಿ ಮಾಡುತ್ತಿದ್ದಾರೆ.