ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿ ಹಾಗೂ ಪತ್ನಿಯ ತಾಯಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ನವಭಾಗ್ ನಗರದಲ್ಲಿ ನಡೆದಿದೆ.
ರೂಪಾ ಮೇತ್ರಿ (32), ಕಲ್ಲವ್ವ (55) ಹತ್ಯೆಯಾದವರು. ಮಲ್ಲಿಕಾರ್ಜುನ ಮೇತ್ರಿ ಎಂಬಾತನೇ ಪತ್ನಿ, ಅತ್ತೆಯನ್ನು ಕೊಂದಿರುವ ಆರೋಪಿ.
ನವಭಾಗ್ ಪ್ರದೇಶದ ಭಾಗವಾನ್ ಎಂಬವರಿಗೆ ಸೇರಿದ ಮನೆಯಲ್ಲಿ ಕಳೆದ ಆರು ತಿಂಗಳಿನಿಂದ ಮೂವರು ಮಕ್ಕಳು, ಪತ್ನಿ ಹಾಗೂ ಅತ್ತೆಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಆರೋಪಿ ಮಲ್ಲಿಕಾರ್ಜುನ. ಪತ್ನಿ ರೂಪಾ ತನ್ನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ, ಮನೆಯಲ್ಲಿ ಕೆಲಸ ಮಾಡುತ್ತಿರಲಿಲ್ಲವೆಂದು ಆಗಾಗ ಜಗಳ ತೆಗೆಯುತ್ತಿದ್ದ ಮಲ್ಲಿಕಾರ್ಜುನ.
ಪತ್ನಿ ರೂಪಾ ಎಂಬಾಕೆ ಮಹಿಳಾ ಹಾಗೂ ವಿವಿಧ ಸಂಘಟನೆಗಳಲ್ಲಿ ತೊಡಗಿಕೊಂಡು ಸದಾ ಮನೆಯಾಚೆ ಇರುತ್ತಿದ್ದರಿಂದ ಗಂಡನಿಗೆ ಕೋಪ ಈ ಹಿನ್ನೆಲೆ ಪತ್ನಿಯೊಂದಿಗೆ ಹಲವು ಸಲ ಜಗಳ ಮಾಡಿಕೊಂಡಿದ್ದನು. ದಿನೇದಿನೆ ಇದೇ ಕಾರಣಕ್ಕೆ ರೋಸಿಹೋಗಿದ್ದ ಪತಿ, ಪತ್ನಿ-ಅತ್ತೆ ಮಲಗಿದ್ದ ವೇಳೆ ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ಕೊಲೆಗೈದ ಬಳಿಕ ಗಾಂಧಿಚೌಕ್ ಪೊಲೀಸ್ ಠಾಣೆಗೆ ತಾನೇ ತೆರಳಿ ಶರಣಾಗಿದ್ದಾನೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಾಗಿದೆ.