ಹೈದರಾಬಾದ್: ಸ್ನೇಹಿತನ ಸಾಲಕ್ಕೆ ಶ್ಯೂರಿಟಿಯಾಗಿ ಸಹಿ ಮಾಡಿದ್ದ ಹೈದರಾಬಾದ್ ಕಾನ್ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಡೆದಿದೆ.
ಅಭಿಲಾಶ್ ನಾಯಕ್ (33) ಮೃತ ದುರ್ದೈವಿ. ಅಭಿಲಾಶ್ 2014ರಲ್ಲಿ ಪೊಲೀಸ್ ಇಲಾಖೆಯ ಸೇವೆಗೆ ಸೇರಿದ್ದು, ಆತ ತನ್ನ ಪತ್ನಿ ಮತ್ತು ಪಾಲಕರೊಂದಿಗೆ ಹೈದರಾಬಾದ್ನ ಸರ್ಕಾರಿ ಕ್ವಾಟ್ರಸ್ನಲ್ಲಿ ಉಳಿದುಕೊಂಡಿದ್ದರು. ಅಭಿಲಾಶ್ ಪತ್ನಿಯ ಹೆಸರು ಇಂದ್ರಜ್ಯೋತಿ. ದಂಪತಿಗೆ ಧೀರಜ್ ಮತ್ತು ಹೇಮಂತ್ ಹೆಸರಿನ ಇಬ್ಬರು ಗಂಡುಮಕ್ಕಳಿದ್ದು, ಮದನ್ನಪೇಟಾ ಪೊಲೀಸ್ ಠಾಣೆಯಲ್ಲಿ ಕಳೆದ ಆರು ವರ್ಷದಿಂದ ಅಭಿಲಾಶ್ ಸೇವೆ ಸಲ್ಲಿಸುತ್ತಿದ್ದರು.
ಅಭಿಲಾಶ್ ಸಹೋದರ ಪ್ರಭುನಾಯಕ್ ಜಿಎಚ್ಎಂಸಿ ವಿಪತ್ತು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಶುಕ್ರವಾರ ಅಭಿಲಾಶ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಕೊಡಾಡ ಪ್ರದೇಶಕ್ಕೆ ತೆರಳಿ ಅವರನ್ನು ಅಲ್ಲಿಯೇ ಬಿಟ್ಟು ಮನೆಗೆ ಮರಳಿದ್ದರು. ಸೋಮವಾರ ಕೆಲಸಕ್ಕೂ ಹೋಗಿ ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳಿದ್ದು, ಊಟ ಮಾಡಿದ ಮೇಲೆ ಸ್ವಲ್ಪ ಮಲಗುವುದಾಗಿ ಹೇಳಿ ಕೋಣೆ ಸೇರಿದ ಅಭಿಲಾಶ್, ಸಂಜೆಯಾದರೂ ಹಿಂದಿರುಗಲೇ ಇಲ್ಲ. ಆದರೂ ಗಾಢ ನಿದ್ರೆಗೆ ಜಾರಿರಬಹುದು ಎಂದು ಪಾಲಕರು ಸುಮ್ಮನಾಗಿದ್ದರು.
ಈ ನಡುವೆ ಸಹೋದರ ಪ್ರಭುನಾಯಕ್ ಸುಮಾರು 10 ಗಂಟೆಗೆ ಮನೆಗೆ ಬಂದು ಅಭಿಲಾಶ್ನನ್ನು ಅನೇಕ ಬಾರಿ ಕರೆದಿದ್ದಾನೆ. ಮಧ್ಯಾಹ್ನ ನಿದ್ರೆಗೆ ಜಾರಿದವರು ಇಷ್ಟೋತ್ತಾದರೂ ಬರಲಿಲ್ಲ ಮತ್ತು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲವಲ್ಲ ಎಂಬ ಅನುಮಾನದಿಂದ ಬಾಗಿಲು ಒಡೆದು ನೋಡಿದಾಗ ಅಭಿಲಾಶ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಇಡೀ ಕುಟುಂಬ ಆಘಾತಕ್ಕೆ ಒಳಗಾಯಿತು.
ತಕ್ಷಣ ಪಾಲಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸುವಷ್ಟರಲ್ಲಿ ಅಭಿಲಾಶ್ ಮೃತಪಟ್ಟಿದ್ದ. ಕೈ ಕುಯ್ದುಕೊಂಡಿದ್ದರಿಂದ ತೀವ್ರ ರಕ್ತಸ್ರಾವವಾಗಿ ಅಭಿಲಾಶ್ ಪ್ರಾಣ ಬಿಟ್ಟಿದ್ದಾನೆ. ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.ಅಭಿಲಾಶ್ ತನ್ನ ಸ್ನೇಹಿತನ ಸಾಲಕ್ಕೆ ಶ್ಯೂರಿಟಿ ಸಹಿ ಹಾಕಿದ್ದ ಎನ್ನಲಾಗಿದೆ. ಕೊಟ್ಟ ಸಾಲವನ್ನು ಸ್ನೇಹಿತ ಹಿಂದಿರುಗಿಸದಿದ್ದಾಗ ಸಾಲ ಕೊಟ್ಟವನು ಅಭಿಲಾಶ್ ಸಂಬಳದಿಂದ ಹಣ ಪಡೆದುಕೊಳ್ಳುತ್ತಿದ್ದ. ಇದರಿಂದಾಗಿ ಅಭಿಲಾಶ್ಗೆ ಸಂಬಳ ಇಲ್ಲದಂತಾಗಿತ್ತು. ಈ ವಿಚಾರವನ್ನು ಮನೆಯವರಿಗೆ ತಿಳಿಸದೇ ರಹಸ್ಯವಾಗಿ ಇಟ್ಟಿದ್ದ. ಇದರಿಂದ ಖಿನ್ನತೆಗೆ ಜಾರಿ ಅಭಿಲಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.