ಬಂಟ್ವಾಳ : ಜಮೀನಿಗೆ ಮೂವರು ಅಕ್ರಮ ಪ್ರವೇಶ ಮಾಡಿ ಭೂಮಿ ಸ್ವಾಧೀನಪಡಿಸಲು ಯತ್ನಿಸಿದ್ದಲ್ಲದೆ ಜೀವಬೆದರಿಕೆ ಒಡ್ಡಿರುವ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಂಬೆಟ್ಟು ಗ್ರಾಮದ ಕಕ್ಕಿಬೆಟ್ಟು ಎಂಬಲ್ಲಿ ಘಟನೆ ನಡೆದಿದೆ.
ಕರುಣಾಕರ ಶೆಟ್ಟಿ ಅವರ ಬಂಟ್ವಾಳ ತಾಲೂಕು ಕೊಡಂಬೆಟ್ಟು ಗ್ರಾಮದ ಕಕ್ಕಿಬೆಟ್ಟು ಎಂಬಲ್ಲಿರುವ ಜಮೀನಿಗೆ ಆರೋಪಿಗಳಾದ ಸಿಪ್ರಿಯನ್ ಕೊಡ್ಡರೋ, ಲೂಯಿಸ್ ಕೊಡೆರೋ ಹಾಗೂ ಮೈಕಲ್ ಕೊಡ್ಡರೋ ಎಂಬವರು ಅಕ್ರಮ ಪ್ರವೇಶ ಮಾಡಿ ಭೂಮಿಯನ್ನು ಸ್ವಾಧೀನಪಡಿಸಲು ಪ್ರಯತ್ನಿಸಿದ್ದಾರೆ.
ಈ ವೇಳೆ ಕರುಣಾಕರ ಶೆಟ್ಟಿ ಆಕ್ಷೇಪಿಸಿದ್ದು, ಈ ಸಂದರ್ಭ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಲು ಬಂದಿರುವುದಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಯೇ ಸಿದ್ದ ಹಾಗೂ ಈ ಬಗ್ಗೆ ಆಕ್ಷೇಪಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ನೀಡಿದ ದೂರಿನಂತೆ ನ್ಯಾಯಾಲಯದ ಅನುಮತಿಯಂತೆ ಬುಧವಾರ ಪೂಂಜಾಲಕಟ್ಟೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/2023 ಕಲಂ 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.