




ಕಬಕ: ಕಬಕ ಮಹಾದೇವಿ ಯುವಕ ಮಂಡಲದ ರಜತ ಸ್ಮರಣೆಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮವು ನಾಳೆ (ಸೆಪ್ಟೆಂಬರ್ 29 ಆದಿತ್ಯವಾರ) ಬಹಳ ವಿಜ್ರಂಭಣೆಯಿಂದ ನಡೆಯಲಿದೆ.
ಯುವಶಕ್ತಿಯ ಯಶಸ್ವೀ ಸಂಘಟನೆಗೆ ಕ್ರೀಡೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಪ್ರೇರಣಾದಾಯಿಯಾಗಿರುತ್ತವೆ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟ ಯುವಕ ಯುವತಿ ಮಂಡಲಗಳ ಪೈಕಿ ಕಬಕ ಶ್ರೀ ಮಹಾದೇವಿ ಯುವಕಮಂಡಲ ಬಹಳ ವಿಶೇಷ ಸ್ಥಾನದಲ್ಲಿ ನಿಲ್ಲುತ್ತದೆ.
ಇಪ್ಪತ್ತೈದು ವರುಷಗಳ ಹಿಂದೆ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಶ್ರೀ ಮಹಾದೇವಿಯ ಆಶೀರ್ವಾದದಿಂದ ಕಬಕ ಹಾಗೂ ಕುಳ ಗ್ರಾಮದ ಉತ್ಸಾಹಿ ಯುವಕರ ತಂಡದಿಂದ ಸಂಘಟನೆ, ಕ್ರೀಡೆ ಮತ್ತು ಸಾಮಾಜಿಕ ಕಾರ್ಯಗಳ ಧೈಯದೊಂದಿಗೆ ಹುಟ್ಟಿಕೊಂಡ ಸಂಸ್ಥೆಯೇ ಶ್ರೀ ಮಹಾದೇವಿ ಯುವಕ ಮಂಡಲ.
ದೇಗುಲದ ವಠಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಯ ಮೂಲಕ ಸಂಸ್ಕಾರ ಪಡೆಯುತ್ತಾ ಬೆಳೆದ ಸಚ್ಚಾರಿತ್ರ್ಯದ ಯುವ ಪಡೆ ಸಮಾಜದ ವಿವಿಧ ಸೇವಾಕಾರ್ಯಗಳಲ್ಲಿ ಕೈ ಜೋಡಿಸುತ್ತಾ ಸಮಾಜದ ವಿಶ್ವಾಸಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಸಮಾಜದಿಂದಲೇ ಗುರುತಿಸಲ್ಪಡುವಷ್ಟರ ಮಟ್ಟಿಗೆ ಬೆಳೆಯುತ್ತಿದೆ. 1999ನೇ ಇಸವಿಯಲ್ಲಿ ನೆಹರು ಯುವ ಕೇಂದ್ರ ಮಂಗಳೂರು ಇದರ ಅಡಿಯಲ್ಲಿ ಸಂಸ್ಥೆಯನ್ನು ನೋಂದಣಿ ಮಾಡಿಸಿ ‘ಶ್ರೀ ಮಹಾದೇವಿ ಯುವಕ ಮಂಡಲ (ರಿ) ಕಬಕ’ ಎಂದು ನಾಮಾಂಕಿತಗೊಳಿಸಲಾಯಿತು. ಪ್ರತಿವರ್ಷ ಹೊಸ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಾ ಶಿಸ್ತುಬದ್ಧ ಸಂಘಟನೆಯಾಗಿ ಶ್ರೀ ಮಹಾದೇವಿ ಯುವಕ ಮಂಡಲವು ಬೆಳೆಯುತ್ತಿದೆ.
25 ವರುಷಗಳನ್ನು ಪೂರೈಸಿರುವ ಶ್ರೀ ಮಹಾದೇವಿ ಯುವಕ ಮಂಡಲ ಬೆಳ್ಳಿಹಬ್ಬದ ಸಂದರ್ಭದಲ್ಲಿ ಸಂಘದ ಕಾರ್ಯಚಟುವಟಿಕೆಗಳು ವಿಸ್ತಾರಗೊಂಡಿದ್ದು ಸಂಘಕ್ಕೆ ಸ್ವಂತ ಕಟ್ಟಡದ ಅವಶ್ಯಕತೆಯನ್ನು ಮನಗಂಡು ಸುಮಾರು 20 ಲಕ್ಷ ರೂ. ಗಳ ಅಂದಾಜು ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸಂಘಟನೆ ಮುಂದಾಗಿ ಕಾರ್ಯಾನುಷ್ಠಾನ ರೂಪಿಸಿ ಇದೀಗ ಕಟ್ಟಡದ ಉದ್ಘಾಟನಾ ಶುಭ ಸಂದರ್ಭದಲ್ಲಿದೆ.