ಮೈಸೂರು : ಮೈಸೂರಿನ ನಂಜನಗೂಡು ಸಂಚಾರ ಠಾಣೆಯ ಮಹಿಳಾ ಪಿಎಸ್ಐ ಪುತ್ರನೊಬ್ಬನ ವ್ಹೀಲಿಂಗ್ ಪುಂಡಾಟಕ್ಕೆ ಅಮಾಯಕ ಜೀವ ಬಲಿಯಾದ ಘಟನೆ ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿ ಮಹಿಳಾ ಪಿಎಸ್ಐ ಪುತ್ರ ಸೈಯದ್ ಐಮಾನ್ ಎಂದು ತಿಳಿದು ಬಂದಿದೆ.
ಆರೋಪಿ ಬೈಕ್ ನಲ್ಲಿ ವ್ಹೀಲಿಂಗ್ ಮಾಡುತ್ತಾ ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧನಿಗೆ ಡಿಕ್ಕಿ ಹೊಡೆಸಿದ್ದ. ಪರಿಣಾಮ ವೃದ್ಧ ಗುರುಸ್ವಾಮಿ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ ಸ್ಥಳೀಯರು ಗಾಯಗೊಂಡಿದ್ದ ಆರೋಪಿ ಹಾಗೂ ವೃದ್ಧನ ಮೃತ ದೇಹವನ್ನು ಕೆಆರ್ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಸೈಯದ್ ಐಮಾನ್ನನ್ನು ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ.
ಕ್ರಮಕ್ಕೆ ಆಗ್ರಹಿಸಿ ಕೆ.ಆರ್ ಆಸ್ಪತ್ರೆ ಶವಾಗಾರದ ಬಳಿ ಮೃತ ಶವದ ಎದುರು ಸಂಬಂಧಿಕರು ಪಿಎಸ್ಐ ಯಾಸ್ಮಿನ್ ತಾಜ್ ರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದ್ದಿದ್ದರು.
ಮಗನ ಶೋಕಿಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ನಂಜನಗೂಡು ಸಂಚಾರ ವಿಭಾಗದದಿಂದ ಬಿಡುಗಡೆಗೊಳಿಸಿ ಪಿಎಸ್ಐ ಯಾಸ್ಮಿನ್ ತಾಜ್ರನ್ನು ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇಂದು ಮಧ್ಯಾಹ್ನ ಡಿಸಿಆರ್ಬಿ ಡಿವೈಎಸ್ಪಿ ಬಳಿ ವರದಿ ಮಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶಕ್ಕೆ ಕಿಡಿಕಾರಿದ ಯಾಸ್ಮಿನ್:
ತಮ್ಮನ್ನು ನಂಜನಗೂಡು ಸಂಚಾರಿ ವಿಭಾಗದಿಂದ ವರ್ಗಾವಣೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೊರಡಿಸಿರುವ ಆದೇಶ ಪ್ರತಿಯನ್ನು ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಪೊಲೀಸ್ ಇಲಾಖೆಯ ವಿರುದ್ದ ಅಸಮಧಾನವನ್ನು ಹೊರಹಾಕಿದ್ದಾರೆ. ಈ ಪೋಸ್ಟ್ನಲ್ಲಿ ಪ್ರೀತಿಯ ಇಲಾಖೆಯಿಂದ ನನ್ನ ವರ್ಗಾವಣೆ ಆದೇಶ ಪ್ರತಿಯನ್ನು ಪಡೆದುಕೊಂಡಿದ್ದೇನೆ ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಇಲಾಖೆ ವಿರುದ್ದ ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದಾರೆ