ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹಾಗೂ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ ಜಂಟಿಯಾಗಿ ತೀವ್ರ ಖಂಡನೆ






ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಪೋಲೀಸ್ ಇಲಾಖೆಯು ಹಿಂದೂ ಹೃದಯ ಸಾಮ್ರಾಟ್ ಹಾಗೂ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಭೋದಿಸುತ್ತಿರುವ ವಿದ್ಯಾಸಂಸ್ಥೆಗಳನ್ನು ಮುನ್ನೆಡುಸುತ್ತಿರುವ ಹಿರಿಯರಾದ ಕಲ್ಲಡ್ಕ ಡಾ.ಪ್ರಭಾಕರ ಭಟ್ ರವರ ಮೇಲೆ ಕೇಸು ದಾಖಲಿಸಿರುವ ಕಾಂಗ್ರೆಸ್ ಸರಕಾರದ ನಡೆ ಖಂಡನೀಯ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹಾಗೂ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ ಜಂಟಿಯಾಗಿ ತೀವ್ರವಾಗಿ ಖಂಡಿಸಿದ್ದಾರೆ.
ಅದೇ ರೀತಿ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲರು ಸೇರಿದಂತೆ ಹಿಂದೂ ಸಂಘಟನೆಗಳಲ್ಲಿ ಕೆಲಸ ಮಾಡುವ ಹಲವು ಹಿಂದೂ ನಾಯಕರನ್ನು ಗಡಿಪಾರು ಮಾಡಲು ನೋಟೀಸ್ ನೀಡಿರುವುದು ಹಿಂದುತ್ವಕ್ಕಾಗಿ ಕೆಲಸ ಮಾಡುವ ನಾಯಕರನ್ನು ದಮನಿಸುವ ಮತ್ತು ಬೆದರಿಸುವ ತಂತ್ರವನ್ನು ತಕ್ಷಣ ನಿಲ್ಲಿಸದಿದ್ದರೆ ಹಿಂದೂ ಸಮಾಜ ಒಟ್ಟಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಮಧ್ಯರಾತ್ರಿಯ ಹೊತ್ತಿನಲ್ಲಿ ಹಿಂದೂ ಸಂಘಟನೆಗಳ ಜವಾಬ್ದಾರಿ ಹೊಂದಿರುವ ಕಾರ್ಯಕರ್ತರ ಮನೆಗೆ ಹೋಗಿ ತೊಂದರೆ ಕೊಡುವಂತಹದ್ದು, ಪೋಟೋ ತೆಗೆಯುವುದು, ಪೋಷಕರನ್ನು ವಿನಾಕಾರಣ ಬೆದರಿಸುತ್ತಿದ್ದಾರೆ ಎಂಬ ವಿಚಾರಗಳು ನಮ್ಮ ಗಮನಕ್ಕೆ ಬಂದಿದೆ.
ಹಿಂದೂ ಸಂಘಟನೆಗಳ ಜವಾಬ್ದಾರಿ ಹೊಂದಿರುವ ಕಾರ್ಯಕರ್ತರು ಕಾನೂನು ಸುವ್ಯವಸ್ಥೆಗೆ ಉದ್ದೇಶ ಪೂರ್ವಕವಾಗಿ ಯಾವತ್ತೂ ಅಡ್ಡಿಪಡಿಸಿದವರಲ್ಲ. ಕಾನೂನು ಸುವ್ಯವಸ್ಥೆಗೆ ಸಂಪೂರ್ಣ ಸಹಕಾರ ಕೊಡುವವರು, ಕಾನೂನಿಗೆ ಗೌರವ ಕೊಟ್ಟು ಬಹಳ ಸಂಯಮದಿಂದ ಇರುವವರು. ಹಾಗಂತ ಕಾರ್ಯಕರ್ತರ ಸಂಯಮವನ್ನು ದೌರ್ಬಲ್ಯ ಅಂತ ತಿಳಿದುಕೊಂಡು ಕಾನೂನು ಸುವ್ಯವಸ್ಥೆ ನೆಪದಲ್ಲಿ ಪೋಲೀಸ್ ಇಲಾಖೆ ಯಾವುದೋ ಕಾಣದ ಕೈಗಳ ಒತ್ತಡಕ್ಕೆ ಮಣಿದು ಅನಗತ್ಯವಾಗಿ ತೊಂದರೆ ಕೊಡುವುದು ಸರಿಯಲ್ಲ. ಹಾಗೆ ಒಂದು ವೇಳೆ ಮುಂದೆ ರಾಜ್ಯ ಕಾಂಗ್ರೆಸ್ ಸರಕಾರವು ಇದೇ ರೀತಿಯ ವರ್ತನೆಯನ್ನು ಮುಂದುವರಿಸಿಕೊಂಡು ಹೋದರೆ ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಕಾಂಗ್ರೆಸ್ನ ಕೊಳಕು ರಾಜಕೀಯ ಕೊನೆಗೊಳಿಸಲು ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.