

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿರುವುದು ನಿಜವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಗೆ ನಾನು ಈಗ ಸಚಿವ. ನಾಗೇಂದ್ರ ರಾಜೀನಾಮೆ ಕೊಟ್ಡ ಮೇಲೆ ನಾನು ಆ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನಾವು ಅಕ್ರಮ ಆಗಿಲ್ಲ ಅಂತ ಹೇಳ್ತಿಲ್ಲ, ಅಕ್ರಮ ಆಗಿದೆ. ಯಾರು ಮಾಡಿದ್ದು, ಯಾರು ಜವಾಬ್ದಾರಿ? ಅವರ ಮೇಲೆ ಕ್ರಮ ತೆಗೆದುಕೊಳ್ತೀವಿ ಅಂತ ಸಿಎಂ ಹೇಳಿದ್ದಾರೆ.
ಹಣಕಾಸು ಜವಾಬ್ದಾರಿ ನಿಭಾಯಿಸೋದು ನಿಗಮದ ಎಂಡಿ, ಅಧಿಕಾರಿಗಳ ಜವಾಬ್ದಾರಿ. ಹಣದ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಇರೋದು ಎಂಡಿಯದ್ದು. ಮಿನಿಸ್ಟರ್ ಪಾಲಿಸಿ ಮೇಕರ್, ಆದರೆ ಹೆಚ್ಚು ಜವಾಬ್ದಾರಿ ಎಂಡಿಯದ್ದು. ಎಂಡಿ ನಿಗಮದ ಹೆಡ್ ಆಗಿರುತ್ತಾರೆ, ಅಧ್ಯಕ್ಷರೂ ಅಲ್ಲ. ದದ್ದಲ್ ಅವರನ್ನ ಅಧ್ಯಕ್ಷರಾಗಿ ಮಾಡಿದ್ವಿ. ನಾಗೇಂದ್ರ ಮಿನಿಸ್ಟರ್ ಆಗಿದ್ರು. ಅವರ ಕಾಲದಲ್ಲಿ ಅಕ್ರಮ ಆಗಿದೆ ಅಂತ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ಅಭಿವೃದ್ಧಿ ನಿಗಮಗಳ ಹಣವನ್ನು ಕಡ್ಡಾಯವಾಗಿ ರಾಜ್ಯ ಖಜಾನೆಯಲ್ಲಿ ಜಮಾ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರಲು ಹಲವು ಮಾರ್ಗಸೂಚಿಗಳನ್ನು ಹಣಕಾಸು ಇಲಾಖೆ ಜಾರಿಗೊಳಿಸಿದೆ ಎಂದು ಹೇಳಿದರು.