’ನಾವು ಎಲ್ಲಾ ದೇವಸ್ಥಾನದ ಜಾಗವನ್ನು ಸರ್ವೆ ಮಾಡಲು ಸರಕಾರದಿಂದ ನಾನು ಆದೇಶಿಸಿದ್ದೇನೆ’- ಶಾಸಕ ಅಶೋಕ್ ಕುಮಾರ್ ರೈ



ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜೆರಮ್ ಸೆರಾವೋ ಸ್ವಇಚ್ಚೆಯಿಂದ ಜಾಗ ಬಿಟ್ಟುಕೊಟ್ಟಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿರುವ 7 ಸೆನ್ಸ್ ಜಾಗ ಸುಮಾರು 16 ವರ್ಷ ಜೆರಮ್ ಸೆರಾವೋರವರ ಸ್ವಾಧೀನದಲ್ಲಿತ್ತು. ಈ ಹಿಂದೆ ನಾಲ್ಕೈದು ಮನೆಗಳನ್ನು ತೆರವುಗೊಳಿಸಿದ್ದು, ಕ್ರಿಶ್ಚಿಯನ್ ಧರ್ಮದವರಾಗಿದ್ದ ಜೆರಮ್ ಸೆರಾವೋ ಈ ಜಾಗ ಉಳ್ಳಾಲ್ತಿಯ ಸಂಚಾರಕ್ಕೆ ಸೇರಿದ್ದು ಸ್ವಇಚ್ಚೆಯಿಂದ ಈ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟು ಕೊಡುತ್ತೇನೆ ಎಂದು ಹೇಳಿದರು.
ಈ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಮಾಧ್ಯಮದೊಂದಿಗೆ ಮಾತನಾಡಿ, “ನಾವು ಎಲ್ಲಾ ದೇವಸ್ಥಾನದ ಜಾಗವನ್ನು ಸರ್ವೆ ಮಾಡಲು ಸರಕಾರದಿಂದ ನಾನು ಆದೇಶಿಸಿದ್ದೇನೆ. ಬಜೆಟ್ನಲ್ಲಿ ರೆವೆನ್ಯೂ ಮಿನಿಸ್ಟರ್ ಜೊತೆ ಕರ್ನಾಟಕದಲ್ಲಿರುವಂತಹ ಎಲ್ಲಾ ಹಿಂದೂ ದೇವಸ್ಥಾನಗಳ ಆಸ್ತಿ-ಪಾಸ್ತಿಗಳು ಎಲ್ಲೆಲ್ಲಿ ಇದೆ ಅದನ್ನು ಸರ್ವೆ ಮಾಡಬೇಕು, ಅದನ್ನು ದೇವಸ್ಥಾನದ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂಬ ನಿರ್ಧಾರವನ್ನು ಬಜೆಟ್ನಲ್ಲಿ ಚರ್ಚಿಸಿದ್ದೇವೆ. ಜೆರಮ್ ಸೆರಾವೋ ಎಂಬವರು ದೇವಸ್ಥಾನಕ್ಕೆ ಸಂಬಂಧಪಟ್ಟ 7 ಸೆನ್ಸ್ ಜಾಗವನ್ನು ಸ್ವಇಚ್ಚೆಯಿಂದ ದೇವಸ್ಥಾನಕ್ಕೆ ಅರ್ಪಣೆ ಮಾಡಿರುತ್ತಾರೆ. ಇವರ ಈ ನಿರ್ಧಾರ, ವಿಶಾಲ ಮನಸ್ಸು ಎಲ್ಲರಿಗೂ ಮಾದರಿಯಾಗಿದ್ದು, ಎಲ್ಲರಿಗೂ ನಿದರ್ಶನರಾಗಿದ್ದಾರೆ” ಎಂದು ಪ್ರತಿಕ್ರಿಯಿಸಿದರು.