ಬಂಟ್ವಾಳ: ಕಳವು ನಡೆಸಿದ್ದಾನೆ ಎಂದು ಆರೋಪಿಸಿ ಯುವಕನಿಗೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳು ಸೇರಿದಂತೆ ತಂಡದ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಕಲ್ಲಡ್ಕದ ಪರನೀರು ಬಳಿ ಘಟನೆ ನಡೆದಿದ್ದು, ಬಾಳ್ತಿಲ ಗ್ರಾಮ ನಿವಾಸಿ ಉದಯ ಪೊಲೀಸರಿಗೆ ದೂರು ನೀಡಿದ್ದು, ಗೋಳ್ತಮಜಲು ನಿವಾಸಿ ಸಚ್ಚು, ರಿಕ್ಷಾ ಚಾಲಕ ಪಚ್ಚು, ರಿಕ್ಷಾ ಚಾಲಕ ಶ್ರೀನಿವಾಸ, ಪಿಕ್ ಆಫ್ ಚಾಲಕ ಚಂದ್ರ ಹಾಗೂ ಮುರಬೈಲು ಹರೀಶ @ ಕೋಗಿಲೆ ಎಂಬುವರುಗಳು ಒಂದು ಆಕ್ಟೀವಾ ಮತ್ತು ರಿಕ್ಷಾದಲ್ಲಿ ಬಂದು ಆತನನ್ನು ತಡೆದು ನಿಲ್ಲಿಸಿ, ಅವ್ಯಾಚ ಶಬ್ದಗಳಿಂದ ಬೈದು, ಕೈಯಿಂದ ಮತ್ತು ಮರದ ಕೋಲಿನಿಂದ ಹಲ್ಲೆ ನಡೆಸಿದ್ದು, ಈ ವೇಳೆ ಉದಯನು ಜೋರಾಗಿ ಬೊಬ್ಬೆ ಹೊಡೆದಾಗ ಆರೋಪಿಗಳು ಮರದ ಕೋಲನ್ನು ಅಲ್ಲಿಯೇ ಬಿಸಾಡಿ, ಜೀವ ಬೆದರಿಕೆ ಹಾಕಿ ತಾವುಗಳು ಬಂದ ವಾಹನಗಳಲ್ಲಿ ತೆರಳಿರುವುದಾಗಿ ಆರೋಪಿಸಲಾಗಿದೆ. ಹತ್ತಿರದ ಮನೆಯ ಮೊಬೈಲ್ ಕದ್ದಿರುವುದಾಗಿ ಆರೋಪಿಸಿ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವೀಡಿಯೋ ವೈರಲ್ ಆಗಿತ್ತು. ಆರೋಪಿಗಳು ಹಲ್ಲೆ ನಡೆಸಿರುವುದಾಗಿ ಉದಯನು ದೂರು ನೀಡಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿರುತ್ತದೆ.