ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಚಂಡಿಕಾಯಾಗ ಅಂಗವಾಗಿ ಮಾತೃಶ್ರೀ ವೇದಿಕೆಯಲ್ಲಿ ನಡೆದ ಧರ್ಮ ಸಭೆಯನ್ನು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.ಎಲ್ಲರೂ ಒಳ್ಳೆಯದರಲ್ಲಿ ಬದುಕಬೇಕೆನ್ನುವ ಅಪೇಕ್ಷೆಯೇ ಧರ್ಮವಾಗಿದೆ.ಧರ್ಮದ ಅಸ್ತಿತ್ವಕ್ಕೆ ದೇವರು ಬೇಕು. ನಂಬಿಕೆಯನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕು. ಮಕ್ಕಳಿಗೆ ಮನೆಯಲ್ಲೇ ಧರ್ಮ ವಿಚಾರವನ್ನು ನೀಡಬೇಕು. ಧರ್ಮ ಪ್ರಜ್ಞೆ ಇದ್ದಾಗ ಉತ್ತಮ ಬದುಕು ಸಾಧ್ಯ ಎಂದವರು ನುಡಿದರು.
ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಚಾಮುಂಡೇಶ್ವರೀ ದೇವೀ ಸೇವಾ ಟ್ರಸ್ಟ್ನ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ವಹಿಸಿದ್ದರು.ಕೇಪು ಖಂಡಿಗ ಶ್ರೀ ಕೈಲಾಸೇಶ್ವರ ದೇವಸ್ಥಾನದ ಧರ್ಮದರ್ಶಿ ರವೀಶ ಖಂಡಿಗ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ, ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜು ನಿವೃತ್ತ ಪ್ರಾಂಶುಪಾಲ ಎ.ಕೃಷ್ಣಪ್ಪ ಪೂಜಾರಿ, ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು.
ಉದ್ಯಮಿಗಳಾದ ರವಿ ಕಕ್ಕೆಪದವು, ಸದಾಶಿವ ಆಚಾರ್ಯ, ಕನ್ಯಾನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ, ಯುವ ವಾಹಿನಿ ಮಾಣಿ ಘಟಕದ ನಿಕಟ ಪೂರ್ವ ಅಧ್ಯಕ್ಷ ಪ್ರಶಾಂತ್ ಅನಂತಾಡಿ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್. ಜಗನ್ನಾಥ ಸಾಲ್ಯಾನ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅನೆಯಾಲ ಮಂಟಮೆ ಮೊದಲಾದವರು ಉಪಸ್ಥಿತರಿದ್ದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ಕಣಿಯೂರು ವಂದಿಸಿದರು. ಹೊರೆಕಾಣಿಕೆ ಸಮಿತಿಯ ವಿನೋದ್ ಶೆಟ್ಟ ಪಟ್ಲಗುತ್ತು ಕಾರ್ಯಕ್ರಮ ನಿರೂಪಿಸಿದರು.
ಫೆ.06 ಬೆಳಗ್ಗೆ ಗಣಪತಿಹೋಮ,ಕಲಶಾಧಿವಾಸ ಹೋಮ ಬ್ರಹ್ಮಕಲಶಪೂಜೆ, ಶಿಖರಕಲಶಪೂಜೆ ನಡೆದು ಶ್ರೀ ಚಾಮುಂಡೇಶ್ವರೀ ದೇವಿಯ ಮೂರ್ತಿಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ ಪೂಜೆ, ನಿತ್ಯ ನೈಮಿತ್ತಿಕ ನಡಾವಳಿಗಳ ನಿರ್ಣಯ, ನಿವೇದನೆ, ಸಪ್ತಶತಿ ಪಾರಾಯಣ, ಗುಳಿಗ ಪ್ರತಿಷ್ಠೆ ಕಲಶಾಭಿಷೇಕ, ವಿಶೇಷ ದ್ರವ್ಯ ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಕ್ಷೇತ್ರದ ನಾಗ ಸಾನಿಧ್ಯದಲ್ಲಿ ಸಾನಿಧ್ಯಕಲಶ ಪೂಜೆ, ಸಾನಿಧ್ಯಕಲಶಾಭಿಷೇಕ, ನಾಗಪೂಜಾ ತಂಬಿಲಾದಿಗಳು, ರಕ್ತೇಶ್ವರೀ ಅಣ್ಣಪ್ಪ ಸ್ವಾಮಿ ಸಾನಿಧ್ಯದಲ್ಲಿ ಕಲಶಾಭಿಷೇಕ ನಡೆಯಲಿದೆ.
ಮಧ್ಯಾಹ್ನ ಸರ್ವಾಲಂಕಾರ ಸಹಿತ ಮಹಾಪೂಜೆ, ಪರಿವಾರ ಸಾನಿಧ್ಯಗಳಲ್ಲಿ ತಂಬಿಲಾದಿಗಳು, ಕ್ರಿಯಾದಕ್ಷಿಣಾದಿಗಳು, ಮಹಾಮಂತ್ರಾಕ್ಷತೆ ನಡೆದು ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ರಂಗಪೂಜೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನವಕರ್ನಾಟಕ ಕೃಪಾಪೋಷಿತ ಯಕ್ಷಗಾನ ಮಂಡಳಿ ಬಾಯಾರು ಮತ್ತು ದಿ. ತಾಳ್ತಜೆ ಸುಬ್ರಾಯ ಭಟ್ ಪ್ರತಿಷ್ಠಾನದಿಂದ ಮೇಧಿನಿ ನಿರ್ಮಾಣ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಾಯಂಕಾಲ ಝೀ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ ಖ್ಯಾತಿಯ ಜ್ಞಾನಗುರುರಾಜ್ ಪುತ್ತೂರು ಇವರಿಂದ ಜ್ಞಾನ ಗಾನಾಂಜಲಿ, ನೃತ್ಯ ಕಲಾವಿದೆ ಕವಿತಾ ಸುಧಾಕರ್ ಮತ್ತು ತಂಡದವರಿಂದ ಭರತನಾಟ್ಯಾಂಜಲಿ ನಡೆಯಲಿದೆ. ರಾತ್ರಿ ರಾಷ್ಟ್ರದೇವೋಭವ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯದ ಸನಾತನ ನೃತ್ಯಾಂಜಲಿ ಭರತ ನಾಟ್ಯ, ದೇಶಭಕ್ತಿ, ಜಾನಪದ ನೃತ್ಯ ವೈವಿದ್ಯ ನಡೆಯಲಿದೆ.