


ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗದ ಮುಖ್ಯಸ್ಥರಾಗಿ ಕನ್ನಡಿಗ ಡಾ.ಬಿ.ಎನ್ ಗಂಗಾಧರ್ ನೇಮಕಗೊಂಡಿದ್ದಾರೆ.
ಗಂಗಾಧರ್ ಅವರು ನಿಮ್ಹಾನ್ಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಪದ್ಮಶ್ರೀ ಪುರಸ್ಕೃತರೂ ಆಗಿದ್ದಾರೆ. ಇದೀಗ ರಾಷ್ಟ್ರಮಟ್ಟದ ಉನ್ನತ ವೈದ್ಯಕೀಯ ಆಯೋಗಕ್ಕೆ ಮುಖ್ಯಸ್ಥರಾಗಿ ಕೇಂದ್ರ ಸರ್ಕಾರದಿಂದ ನೇಮಕಗೊಂಡಿದ್ದಾರೆ. ತಮ್ಮ ವೈದ್ಯಕೀಯ ರಂಗ ಸೇವೆಗೆ ಡಾ.ಬಿ.ಎನ್.ಗಂಗಾಧರ್ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು.
ಡಾ.ಗಂಗಾಧರ್ ಪ್ರಸ್ತುತ ವೈದ್ಯಕೀಯ ಮೌಲ್ಯಮಾಪನ ಹಾಗೂ ರೇಟಿಂಗ್ ಮಂಡಳಿ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮುಖ್ಯಸ್ಥರಾಗಿದ್ದ ಡಾ.ಎಸ್.ಸಿ ಶರ್ಮಾ ಅಧಿಕಾರ ಅವಧಿ ಕಳೆದ ಸಪ್ಟಂಬರ್ನಲ್ಲಿ ಮುಗಿದಿತ್ತು. ಡಾ.ಸಂಜಯ್ ಬಿಹಾರಿ ಅವರನ್ನು ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಂಜಯ್ ತಿರುವನಂತಪುರದ ಶ್ರೀ ಚಿತ್ರ ತಿರುನಾಳ ವೈದ್ಯಕೀಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆ ನಿರ್ದೇಶಕರಾಗಿದ್ದಾರೆ.
ಇನ್ನು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿ ಪೂರ್ಣಾವಧಿ ಸದಸ್ಯರನ್ನಾಗಿ ಡಾ.ಅನಿಲ್ ಡಿಕ್ರೂಜ್ ಅವರನ್ನು ನೇಮಕ ಮಾಡಲಾಗಿದೆ. ಡಾ.ಅನಿಲ್ ಡಿಕ್ರೂಜ್ ಮುಂಬೈನ ಅಪೊಲೊ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ನಿರ್ದೇಶಕರಾಗಿದ್ದಾರೆ. ಅರೆಕಾಲಿಕ ಸದಸ್ಯರನ್ನಾಗಿ ಡಾ.ರಾಜೇಂದ್ರ ಅಚ್ಯುತ ಬಡ್ಡೆ ನೇಮಕಗೊಂಡಿದ್ದಾರೆ. ಡಾ.ರಾಜೇಂದ್ರ ಅಚ್ಯುತ ಬಡ್ಡೆ ಟಾಟಾ ಮೆಮೋರಿಯಲ್ ಸೆಂಟರ್ನ ವಿಶ್ರಾಂತ ಪ್ರಾಧ್ಯಾಪಕರಾಗಿದ್ದಾರೆ.