ಕಾಸರಗೋಡು: ಕಬ್ಬಿಣದ ರಾಡ್ ನಿಂದ ಹೊಡೆದು ಮಗ ತಂದೆಯನ್ನು ಕೊಲೆಗೈದ ಘಟನೆ ಕಾಸರಗೋಡಿನ ಪಳ್ಳಿ ಕೆರೆ ಎಂಬಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ಪಳ್ಳಿ ಕೆರೆ ಥಿಯೇಟರ್ ಸಮೀಪದ ಅಪ್ಪು ಕುಂಞಿ(65) ಹಾಗೂ ಕೊಲೆ ಮಾಡಿದ ವ್ಯಕ್ತಿ ಪುತ್ರ ಪ್ರಮೋದ್ (37) ಎಂದು ಗುರುತಿಸಲಾಗಿದೆ.
ಪುತ್ರ ಪ್ರಮೋದ್ ದಿನನಿತ್ಯ ಮನೆಯಲ್ಲಿ ತಂದೆಗೆ ಮಾನಸಿಕ ಹಿಂಸೆ, ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಅಪ್ಪು ಕುಂಞಿಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಭಾನುವಾರ ಪ್ರಮೋದ್ ತಂದೆಯ ಕೊಲೆಗೆ ಯತ್ನಿಸಿದ್ದಾನೆ. ಬಳಿಕ ತಂದೆ ಅಪ್ಪು ಕುಂಞಿ ಪೊಲೀಸರಿಗೆ ಪುನಃ ದೂರು ನೀಡಿದ್ದು, ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ನಂತರ ಸೋಮವಾರ ಸಂಜೆ ಮನೆಗೆ ತಲುಪಿದ ಪುತ್ರ ಕಬ್ಬಿಣದ ರಾಡ್ ನಿಂದ ತಂದೆಯ ತಲೆಗೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆದ ಸ್ಥಳದಲ್ಲೇ ಅಪ್ಪು ಕುಂಞಿ ಅವರು ಮೃತ ಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಬೇಕಲ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.