

ಕಾಸರಗೋಡು: ಜಮ್ಮು-ಕಾಶ್ಮೀರದ ರಿಯಾಜಿಯಲ್ಲಿ ಬಸ್ ಮೇಲೆ ನಡೆದ ಉಗ್ರರ ದಾಳಿಯನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಶಕ್ತಿ ಹಾಗೂ ದುರ್ಗಾ ವಾಹಿನಿಯ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಸಂಜೆ ಪೆರ್ಲ ಪೇಟೆಯಲ್ಲಿ ಪ್ರತಿಭಟನಾ ರ್ಯಾಲಿ ಸಂಘಟಿಸಲಾಯಿತು.

ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ 53 ಆಸನಗಳ ಬಸ್ ಮೇಲೆ ಭಯೋತ್ಪಾದಕರು ಕಳೆದ ಭಾನುವಾರ ಗುಂಡಿನ ದಾಳಿ ನಡೆಸಿದ್ದರಿಂದ ಎರಡು ವರ್ಷದ ಬಾಲಕ ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ಪೋನಿ ಪ್ರದೇಶದ ಥೇರಿಯಾಟ್ ಗ್ರಾಮದ ಬಳಿಯ ಕತ್ರಾದಲ್ಲಿರುವ ಶಿವ ಖೋರಿ ದೇವಸ್ಥಾನದಿಂದ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಬಸ್ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಪೆರ್ಲ ನಗರದಾದ್ಯಂತ ಕಾರ್ಯಕರ್ತರು ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ವಿಶ್ವಹಿಂದೂ ಪರಿಷತ್ತಿನ ಕಣ್ಣೂರು ವಿಭಾಗದ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಸಂಕಪ್ಪ ಭಂಡಾರಿಯವರು ಉದ್ಘಾಟಿಸಿದರು.
ಭಯೋತ್ಪಾದಕ ದಾಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ವಿಎಚ್ಪಿ ಮತ್ತು ಇತರ ಸಂಘ ಪರಿವಾರದ ಸಂಘಟನೆಗಳ ಜಿಲ್ಲಾ ಪದಾಧಿಕಾರಿಗಳು ಸೇರಿ ಜಿಲ್ಲಾಧಿಕಾರಿ ಮೂಲಕ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಮನವಿ ಪತ್ರವನ್ನು ಹಸ್ತಾಂತರಿಸಿದ್ದಾರೆ ಎಂಬುದಾಗಿ ಹೇಳಿದರು.
ಸತ್ಸಂಘ ಪ್ರಮುಖ್ ಮಾಧವನ್ ನಂಬೂತಿರಿ ಮುಖ್ಯ ಭಾಷಣಗೈದು, ದೇಶದ ಸಮಸ್ತ ಜನತೆಯನ್ನು ಬೆಚ್ಚಿ ಬೀಳಿಸಿರುವ ಈ ಘಟನೆಯಲ್ಲಿ ಭಯೋತ್ಪಾದನೆ ನಿರ್ಮೂಲನೆಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು, ಎಲ್ಲಾ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಕರೆನೀಡಿದರು.
ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ವಿಎಚ್ಪಿ ಮುಖಂಡರು, ಇದು ಪಾಕಿಸ್ತಾನ ಬೆಂಬಲಿತ ಇಸ್ಲಾಮಿಕ್ ಭಯೋತ್ಪಾದಕರ ಹೇಡಿತನದ ದಾಳಿ ಎಂದು ಹೇಳಿದ್ದಾರೆ. ಪೆರ್ಲ ಟೌನ್ನಲ್ಲಿ ವಿಎಚ್ಪಿ, ಬಜರಂಗದಳ ಮತ್ತು ಮಾತೃ ಶಕ್ತಿ ಕಾರ್ಯಕರ್ತರು ಭಯೋತ್ಪಾದನೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಜಿಲ್ಲಾ ಸಹ ಕಾರ್ಯದರ್ಶಿ ಹರಿಪ್ರಸಾದ್ ಪುತ್ರಕಳ, ಹರೀಶ್ ನಾರಂಪಾಡಿ, ಅನಿಲ್ ಮಣಿಯಂಪಾರೆ, ಪ್ರದೀಪ್ ಪೆರಿಯಾಲ್ ಮೊದಲಾದವರು ರಕ್ಷಣಾ ರ್ಯಾಲಿಗೆ ನೇತೃತ್ವ ವಹಿಸಿದ್ದರು. ರಾಧಾಕೃಷ್ಣ ಭಟ್ ಪತ್ತಡ್ಕ ಸ್ವಾಗತಿಸಿ ಕೆ.ಸಿ.ಚಂದ್ರನ್ ಧನ್ಯವಾದವಿತ್ತರು.