ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಭಾರೀ ರಾಜಕೀಯ ಬೆಳವಣಿಗೆಯಾಗುತ್ತಿದ್ದು, ಎಡ ಪಕ್ಷಗಳ 98 ಜನ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಈ 98 ಜನ ಸಿಪಿಐ(ಎಂ), ಸಿಪಿಐ, ಸಿಐಟಿಯು ಪಕ್ಷಗಳ ಮಾಜಿ ಸದಸ್ಯರಾಗಿದ್ದು, ಎಡ ಪಕ್ಷಗಳ ಕೆಳ ಹಂತದ ಕಾರ್ಯಕರ್ತರಾಗಿದ್ದಾರೆ. ಇಂದು ಕೇಂದ್ರ ಸಚಿವರಾದ ವಿ.ಮುರುಳೀಧರನ್ ಹಾಗೂ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಫೆ.21ರಂದು ದಕ್ಷಿಣ ರಾಜ್ಯಗಳಲ್ಲಿ ಆರಂಭವಾದ ವಿಜಯ ಯಾತ್ರೆ ಬಳಿಕ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಬಲಗೊಳ್ಳುತ್ತಿದೆ. ಈ ಯಾತ್ರೆಯ ಮಾರ್ಚ್ 7ರ ವರೆಗೆ ನಡೆಯಲಿದ್ದು, ಕೊನೇಯ ಹಂತದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ಕೇಂದ್ರ ಸಚಿವರು ಹಾಗೂ ನಾಯಕರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಚುನಾವಣಾ ಕಚೇರಿ ಆರಂಭ: ಕೇರಳದ ತಿರುವನಂತಪುರಂನಲ್ಲಿ ವಿಧಾನಸಭಾ ಚುನಾವಣೆ ಸಲುವಾಗಿ ಚುನಾವಣಾ ಕಚೇರಿ ತೆರೆದಿದ್ದು, ಮಂಗಳವಾರ ಕೇರಳದ ಬಿಜೆಪಿ ಉಸ್ತುವಾರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಹ ಉಸ್ತುವಾರಿಯೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಉದ್ಘಾಟಿಸಿದರು. ಇದೇ ವೇಳೆ ಎನ್ ಡಿಎ ಪ್ರಮುಖರ ಸಭೆಯನ್ನು ಸಹ ನಡೆಸಲಾಯಿತು.