ಉಳ್ಳಾಲ: ಕೇರಳದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿಯಲ್ಲಿ ಪ್ರಯಾಣಿಸುವರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಇಂದು ತಲಪಾಡಿ ಗಡಿಯಲ್ಲಿ ಮಂಗಳೂರು ಪೊಲೀಸರು ಬೀಡು ಬಿಟ್ಟಿದ್ದು, ಕೇರಳದಿಂದ ಆಗಮಿಸುವ ಪ್ರಯಾಣಿಕರಿಗೆ ನಾಳೆಯಿಂದ ಕೋವಿಡ್ ನೆಗೆಟಿವ್ ವರದಿಯೊಂದಿಗೆ ಮಂಗಳೂರು ಪ್ರವೇಶಿಸಿ ಎಂದು ಸೂಚನೆ ನೀಡುತ್ತಿದ್ದಾರೆ.
ಅಲ್ಲದೆ ಸ್ಥಳದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರು ಇದ್ದು, ಮಂಗಳೂರು ಪ್ರವೇಶಿಸುವವರ ಕೋವಿಡ್ ತಪಾಸಣೆ ಮಾಡುತ್ತಿದ್ದಾರೆ.
ನಾಳೆಯಿಂದ ಜಿಲ್ಲಾಧಿಕಾರಿ ಅದೇಶದಂತೆ ಕೊರೋನಾ ನೆಗೆಟಿವ್ ವರದಿ ಇದ್ದವರನ್ನು ಮಾತ್ರ ಜಿಲ್ಲೆಯೊಳಗೆ ಬಿಡಲಾಗುವುದು.
ಜಿಲ್ಲಾಧಿಕಾರಿ ಕ್ರಮದ ವಿರುದ್ಧ ಪ್ರತಿಭಟನೆ:
ಜಿಲ್ಲಾಧಿಕಾರಿಯ ಈ ಕ್ರಮದ ವಿರುದ್ಧ ಸ್ಥಳೀಯ ಕೇರಳ ನಿವಾಸಿಗಳು ಪ್ರತಿಭಟನೆ ಕೈಗೊಂಡಿದ್ದು, ಗಡಿಯಲ್ಲಿ ತಪಾಸಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಡಿಗೆ ಮಂಜೇಶ್ವರ ಶಾಸಕ ಎಂಸಿ ಕಮರುದ್ದೀನ್ ಭೇಟಿ ನೀಡಿದ್ದು, ಜಿಲ್ಲಾಧಿಕಾರಿಯ ಈ ಅದೇಶದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದರು.
ಜಿಲ್ಲಾಡಳಿತ ದ ಈ ಕ್ರಮದಿಂದಾಗಿ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದು, ಕ್ಲಪ್ತ ಸಮಯಕ್ಕೆ ಕಾಲೇಜು ತಲುಪಲಾಗದೆ ಪರದಾಡುತ್ತಿದ್ದರು.