ಬೆಂಗಳೂರು: ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ದೊಂಬಿ ಮಾಡಿದವರಿಂದಲೇ ನಷ್ಟ ವಸೂಲಿ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆ.15ರ ತನಕ ನಿಷೇಧಾಜ್ಞೆ ವಿಸ್ತರಣೆ ಮಾಡಲಾಗಿದೆ. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದೆ. ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಆರೋಪಿ ನವೀನ್ ವಿರುದ್ಧ ತಡವಾಗಿ ಎಫ್ ಐ ಆರ್ ದಾಖಲು ಮಾಡಲಾಗಿದೆ ಎಂದು ಮಾತುಗಳು ಕೇಳಿಬರುತ್ತಿದೆ. ಆದರೆ ಮಂಗಳವಾರ 5.45ಕ್ಕೆ ಆತನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಫಿರೋಜ್ ಪಾಷಾ 7.15ಕ್ಕೆ ಡಿ.ಜೆ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಸಂಜೆ 7.40ಕ್ಕೆ ಎಫ್ ಐ ಆರ್ ದಾಖಲಾಗಿದೆ. ದೂರು ದಾಖಲಿಸುವಲ್ಲಿ ವಿಳಂಬ ಆಗಿಲ್ಲ. ಪ್ರಕರಣದ ದಾರಿ ತಪ್ಪಿಸಲು ವಿಳಂಬ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಎಫ್ ಐ ಆರ್ ದಾಖಲಾದ್ರೂ ಗಲಭೆ ಮಾಡಿದ್ರು. ಘಟನೆಗೆ ಸ್ಥಳೀಯ ರಾಜಕಾರಣದ ಲೆಕ್ಕಾಚಾರಗಳು, ಭಿನ್ನಾಭಿಪ್ರಾಯಗಳು ಕಾರಣ ಎಂದು ಹೇಳಿದರು. ಪ್ರಕರಣದಲ್ಲಿ ಎಸ್ ಡಿಪಿಐ ಪಾತ್ರ ಹಾಗೂ ಸ್ಥಳೀಯ ಕಾರ್ಪೊರೇಟರ್ ಗಳನ್ನು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಮೀರ್ ಅಹಮ್ಮದ್ ವಿರುದ್ಧ ಹರಿಹಾಯ್ದ ಬೊಮ್ಮಾಯಿ:
ಇದೇ ವೇಳೆ ಜಮೀರ್ ಅಹಮ್ಮದ್ ವಿರುದ್ಧ ಕಿಡಿಕಾರಿದ ಬಸವರಾಜ ಬೊಮ್ಮಾಯಿ, ಜಮೀರ್ ಅವರ ನಿರ್ಣಯ ಯಾರ ಪರ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಇದು ಕಾಂಗ್ರೆಸ್ ನ ಓಲೈಸುವ ರಾಜಕಾರಣ ಎಂದು ವಾಗ್ದಾಳಿ ನಡೆಸಿದ್ರು.