


ಕಿನ್ನಿಗೋಳಿ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಸಹ ಸವಾರ ಮೃತಪಟ್ಟ ಘಟನೆ ಕಿನ್ನಿಗೋಳಿಯ ಬಟ್ಟಕೋಡಿ ಎಂಬಲ್ಲಿ ನಡೆದಿದೆ.
ಮೃತಪಟ್ಟ ಯುವಕರನ್ನು ಮೂಲತಃ ಧಾರವಾಡ ಸವದತ್ತಿ ಕಲ್ಲೂರು ನಿವಾಸಿ ಆತ್ಮಾನಂದ ಅಂಬಿಗರ(27) ಹಾಗೂ ನವೀನ್ ಹೂಗಾರ (26) ಎಂದು ಗುರುತಿಸಲಾಗಿದೆ.
ಮೃತ ನವೀನ್ ಮತ್ತು ಆತ್ಮಾನಂದ ಪದ್ಮನ್ನೂರು ಕಡೆಯಿಂದ ಕಿನ್ನಿಗೋಳಿ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದು, ಬಟ್ಟಕೋಡಿ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಾಗ ಸವಾರ ಆತ್ಮಾನಂದರ ನಿಯಂತ್ರಣ ತಪ್ಪಿ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಅಪಘಾತದಿಂದ ವಿದ್ಯುತ್ ಕಂಬಕ್ಕೆ ಕೂಡ ಹಾನಿಯಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಮೆಸ್ಕಾಂ ಕಿನ್ನಿಗೋಳಿ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೃತರಿಬ್ಬರು ಕಿನ್ನಿಗೋಳಿ ಸಮೀಪದ ಪದ್ಮನ್ನೂರು ಬಳಿ ಪ್ರತ್ಯಂಗಿರಾ ಎಂಟರ್ ಪ್ರೈಸಸ್ ಎಂಬ ರೆಡಿಮೇಡ್ ಆವರಣ ಗೋಡೆ ನಿರ್ಮಾಣದ ಸಂಸ್ಥೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಮೃತ ನವೀನ್ ಕುಮಾರ್ ವಿವಾಹಿತನಾಗಿದ್ದರೆ, ಆತ್ಮಾನಂದ ಅವಿವಾಹಿತ.