ವಿಟ್ಲ: ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಿಂದ ಕೈ ದೇವರಾಗಿ ಆವಾಹಿಸಿ ಬಂದಂತಹ ಷಣ್ಮುಖ ಸುಬ್ರಹ್ಮಣ್ಯ ದೇವರು ಕೋಲ್ಪೆಯ ಪುಣ್ಯ ಪಾವನ ಕ್ಷೇತ್ರದಲ್ಲಿ ನೆಲೆ ನಿಂತು ಭಕ್ತ ಕೋಟಿಯಿಂದ ಆರಾಧನೆಗೊಳಪಡುತ್ತಿದ್ದಾರೆ.

ವರ್ಷಂಪ್ರತಿ ಶ್ರಿ ದೇವರ ವೈಭವದ ಜಾತ್ರೋತ್ಸವಕ್ಕೆ ಊರ ಪರವೂರ ಭಕ್ತ ಮಂದಿ ಸಾಕ್ಷಿಯಾಗಿ ದೇವರ ಅನುಗ್ರಹಕ್ಕೆ ಪ್ರಾಪ್ತವಾಗುತ್ತಿದ್ದಾರೆ. ಭಕ್ತರಿಂದ ವಿವಿಧ ರೀತಿಯ ಸೇವೆಗಳನ್ನು ಪಡೆಯುತ್ತಿದ್ದಾರೆ. ಈ ಬಾರಿ ದೇವರ ವಿಗ್ರಹ ಬೆಳ್ಳಿ ಪ್ರಭಾವಳಿಯಿಂದ ಕಂಗೊಳಿಸಲಿದೆ.


ಶ್ರೀ ದೇವರ ಪರಮ ಭಕ್ತರಾದ ಎಸ್ ಎಲ್ ವಿ ಗ್ರೂಪ್ ನ ಮ್ಹಾಲಕರಾದ ದಿವಾಕರ ದಾಸ್ ರವರು ದೇವರಿಗೆ ಬೆಳ್ಳಿಯ ಪ್ರಭಾವಳಿ ಸಮರ್ಪಿಸಿದ್ದಾರೆ.

ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ಸುಂದರಿ ರಾಮದಾಸ್ ರವರ ಪುತ್ರ ಮೈಸೂರಿನ ಎಸ್.ಎಲ್.ವಿ. ಬುಕ್ ಹೌಸ್ ನ ಮಾಲಕರಾಗಿರುವ ದಿವಾಕರ್ ದಾಸ್ ನೇರ್ಲಾಜೆಯವರು ಸೇವಾ ರೂಪದಲ್ಲಿ ಶ್ರೀ ದೇವರಿಗೆ ಬೆಳ್ಳಿಯ ಪ್ರಭಾವಳಿಯನ್ನು ಜ.18 ರಂದು ದೇವಾಲಯಕ್ಕೆ ಸಮರ್ಪಣೆ ಮಾಡಿದ್ದಾರೆ.

ಎಸ್ ಎಲ್ ವಿ ಯಿಂದ ವಿಶೇಷ ಸೇವೆ ಸುಮಾರು ಹದಿನೈದು ವರುಷಗಳಿಂದ ಶ್ರೀ ಕ್ಷೇತ್ರ ಕೋಲ್ಪೆಯ ಜಾತ್ರೋತ್ಸವದ ಸಂದರ್ಭದಲ್ಲಿ ಹೂವಿನ ಅಲಂಕಾರವನ್ನು ಮಾಡಿಸಿಕೊಂಡು ಬಂದಿರುತ್ತಾರೆ.

ದಿವಾಕರ ದಾಸ್ ರವರು ಮೈಸೂರಿನಲ್ಲಿ ಉದ್ಯಮಿಯಾದರೂ ಹುಟ್ಟೂರಿನ ಅಭಿಮಾನ, ದೇವರ ಭಕ್ತಿ ಅವರಲ್ಲಿ ವಿರಾಜಮಾನವಾಗಿದೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ದಾನ ಧರ್ಮದ ಮುಖೇನ ಉದ್ಯಮದಲ್ಲಿ ಪಡೆದುದನ್ನು ಸಮಾಜಕ್ಕೆ ಸೇವೆ ರೂಪದಲ್ಲಿ ನೀಡಿ ಗುರುತಿಸಿಕೊಂಡಿದ್ದಾರೆ.

