


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಜೂ.30 ರಂದು ಆಶ್ಲೇಷ ಬಲಿ ಪೂಜಾ ಮಂದಿರ ಶಂಕುಸ್ಥಾಪನೆ ಸಮಾರಂಭನಡೆಯಲಿದೆ. ಹಿರಿಯ ಬಿಜೆಪಿ ಮುಖಂಡರಾದ ಹಾಗೂ ಮಾಜಿ ಮುಜರಾಯಿ ಸಚಿವರಾದ ಮಾಲೂರು ಕೃಷ್ಣಯ್ಯ ಶೆಟ್ಟಿಯವರು ಇದನ್ನು ದಾನವಾಗಿ ನೀಡುತ್ತಿದ್ದು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಯು.ಟಿ ಖಾದರ್, ದಿನೇಶ್ ಗುಂಡೂರಾವ್, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿರುವರು ಎಂದು ತಿಳಿದುಬಂದಿದೆ.ಈ ಆಶ್ಲೇಷ ಮಂದಿರವನ್ನು ಹಿಂದಿನ ಮೋಹನ್ ರಾಮ್ ಸುಳ್ಳಿ ಅವರ ನೇತೃತ್ವದ ವ್ಯವಸ್ಥಾಪನಾ ಸಮೀತಿ ಇರುವಾಗ ಜ್ಯೋತಿಷ್ಯರ ಪ್ರಶ್ನಾಚಿಂತನೆಯಾಗಿ ಯಾವುದೇ ಕಾರಣಕ್ಕೂ ದಿನನಿತ್ಯ ಆಗುವ ಪೂಜೆ ದೇವಾಲಯದ ಪರಿಧಿಯಿಂದ ಬೇರೆ ಕಡೆ ಹೋಗದೆ ದೇವಾಲಯದ ಅನ್ನಛತ್ರದ ಹಿಂಭಾಗ ಆಗಬಹುದು ಎಂದು ತಿಳಿಸಿದ್ದರು ಇದರ ಪ್ರಕಾರವಾಗಿ ಆಶ್ಲೇಷ ಬಲಿ ಮಂದಿರಕ್ಕೆ ಮಾ.9 ರಂದು ದಾನಿಗಳಾದ ಮಾಲೂರು ಕೃಷ್ಣಯ್ಯ ಶೆಟ್ಟಿ ಅವರೇ ಶಂಕುಸ್ಥಾಪನೆ ಮಾಡಿದ್ದರು. ಶಂಕುಸ್ಥಾಪನೆ ನಂತರ ರಾಜಕೀಯ ಕಾರಣಗಳಿಂದ ಕಟ್ಟಡದ ಕಾಮಗಾರಿ ನಡೆಸಲು ಅನುಮೋದನೆ ಕೊಟ್ಟಿರಲಿಲ್ಲ.
ಇದೀಗ ಅದೇ ಮಂದಿರಕ್ಕೆ ಮತ್ತೆ ಶಂಕುಸ್ಥಾಪನೆ ನಡೆಸಲು ನಿರ್ಧರಿಸಲಾಗಿದೆ ತಿಳಿದುಬಂದಿದೆ ಮತ್ತು ಮಂದಿರವನ್ನು ದೂರದ ತುಳಸಿ ತೋಟಕ್ಕೆ ಸ್ಥಳಾಂತರಿಸಿ ಅಲ್ಲಿ ಮಂದಿರ ಕಾಮಗಾರಿ ನಡೆಸಲು ತೀರ್ಮಾನ ಕೈಗೊಂಡ ಮಾಹಿತಿಯಿದೆ.ದೇವಾಲಯದಲ್ಲಿ ನಿತ್ಯ ಸಾವಿರಾರು ಸೇವೆ ನಡೆಯುವಂತಹ ಪೂಜೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಪರಿಧಿಯಿಂದಲೇ ದೂರ ನಡೆಸಿ ಸ್ಥಳೀಯ ಖಾಸಗಿಯವರಿಗೆ ಅನುಕೂಲವಾಗಲಿದ್ದು ದೇವಾಲಯದ ಪೂಜೆ ನಡೆಯುವ ಸ್ಥಳದಿಂದ ಖಾಸಗಿಯವರು ನಡೆಸುವ ಪೂಜಾ ಸ್ಥಳವು ಹತ್ತಿರವಿದ್ದು ಭಕ್ತರು ದೇವಾಲಯದಿಂದ ಖಾಸಗಿಯವರಲ್ಲೆ ಹೆಚ್ಚು ಹೋಗುವ ರೀತಿ ಆಗಬಹುದು ಎಂದು ಭಕ್ತರಲ್ಲಿ ಗೊಂದಲವಿರುವ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.