Saturday, June 28, 2025
spot_imgspot_img
spot_imgspot_img

ಕುಂದಾಪುರ: ಹುಲ್ಲು ತರಲು ಹೋದ ಯುವತಿ ಕಾಲು ಜಾರಿ ಅಣೆಕಟ್ಟಿಗೆ ಬಿದ್ದು ಸಾವು..!

- Advertisement -
- Advertisement -

ಕುಂದಾಪುರ: ದನಗಳಿಗೆ ಹುಲ್ಲು ತರಲು ಹೋಗಿದ್ದ ಯುವತಿ ಮರಳಿ ಮನೆಗೆ ಬರುವಾಗ ಕಾಲು ಜಾರಿ ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯ ಜಂಬೆಹಾಡಿ ಎಂಬಲ್ಲಿ ನಡೆದಿದೆ.

ಮೃತಪಟ್ಟ ಯುವತಿಯನ್ನು ಜಡ್ಡಿನಗದ್ದೆಯ ಜಂಬೆಹಾಡಿ ಸಂಜೀವ ನಾಯ್ಕ ಮತ್ತು ನರ್ಸಿ ದಂಪತಿಯ 8 ಮಂದಿ ಮಕ್ಕಳಲ್ಲಿ ಕೊನೆಯವರಾದ ಮೂಕಾಂಬಿಕಾ (23) ಎಂದು ಗುರುತಿಸಲಾಗಿದೆ.

ಮೂಕಾಂಬಿಕಾ ಅವರು ಅಮಾಸೆಬೈಲಿನ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪಾಳಿ ಮಧ್ಯಾಹ್ನದ ಬಳಿಕ ಇದ್ದುದರಿಂದ ಬೆಳಗ್ಗೆ ಹುಲ್ಲು ತರಲು ಅತ್ತಿಗೆ ಅಶ್ವಿನಿ ಅವರೊಂದಿಗೆ ತೋಟಕ್ಕೆ ಹೋಗಿದ್ದರು. ಮನೆಗೆ ಹಿಂದಿರುಗುವಾಗ ಅಶ್ವಿನಿ ಅವರು ಹುಲ್ಲಿನ ಹೊರೆಯನ್ನು ಹೊತ್ತುಕೊಂಡು ಮನೆಯ ಕಡೆಗೆ ಹೊರಟಿದ್ದು, ಮೂಕಾಂಬಿಕಾ ಅವರನ್ನು ಹಿಂಬಾಲಿಸುತ್ತಿದ್ದರು. ಮನೆ ತಲುಪಿದ ಅಶ್ವಿನಿ ಅವರು ಹಿಂದಿರುಗಿ ನೋಡಿದಾಗ ಮೂಕಾಂಬಿಕಾ ಜೊತೆಗೆ ಇರಲಿಲ್ಲ. ಅವರನ್ನು ಕರೆಯುತ್ತ ಪುನಃ ತೋಟದ ಕಡೆಗೆ ತೆರಳಿದರು. ಮನೆಗೆ ಬರುವ ಇನ್ನೊಂದು ಮಾರ್ಗವಾದ ಜಂಬೆಹಾಡಿ ಮಾರ್ಗವಾಗಿ ಮೂಕಾಂಬಿಕಾ ಅವರನ್ನು ಹುಡುಕುತ್ತ ಬಂದಾಗ ಅಣೆಕಟ್ಟಿನ ದಂಡೆಯ ಮೇಲೆ ಹುಲ್ಲು ಕೊಯ್ಯುವ ಕತ್ತಿ ಕಾಣಿಸಿತು. ಭಯದಿಂದ ಅಶ್ವಿನಿ ಅವರು ಬೊಬ್ಬೆ ಹಾಕಿದಾಗ ಮನೆಯವರು ಓಡಿ ಬಂದು ಅಣೆಕಟ್ಟಿನಲ್ಲಿ ಹುಡುಕಿದ್ದು ಮೃತದೇಹ ಪತ್ತೆಯಾಗಗಿದೆ.

ಮರಳಿ ಬರುವಾಗ ಅಶ್ವಿನಿ ಅವರು ಅಣೆಕಟ್ಟಿನ ಕೆಳಭಾಗದಲ್ಲಿ ಹೊಳೆಗೆ ಇಳಿದು ದಾಟಿಕೊಂಡು ಬಂದಿದ್ದರು. ಆದರೆ ಮೂಕಾಂಬಿಕಾ ಅವರು ಅಲ್ಲಿ ಅತ್ತಿಗೆಯನ್ನು ಹಿಂಬಾಲಿಸದೆ ಅಣೆಕಟ್ಟಿನ ದಂಡೆಯ ಮೇಲಿನಿಂದ ಬಂದ ಕಾರಣ ಕಾಲುಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಶಂಕರ ನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಘಟನಾ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಅಮಾಸೆಬೈಲು ಠಾಣೆಯ ಎಸ್‌ಐ ಅಶೋಕ ಕುಮಾರ್, ಅಮಾಸೆಬೈಲು ವಿಎಒ ಚಂದ್ರಶೇಖರ ಮೂರ್ತಿ, ಪಿಡಿಒ ಸ್ವಾಮಿನಾಥ್, ಗ್ರಾ.ಪಂ. ಸದಸ್ಯ ಚಂದ್ರ ಶೆಟ್ಟಿ ಮೊದಲಾದವರು ಭೇಟಿ ನೀಡಿದರು.

ಮೂಕಾಂಬಿಕಾ ತಾಯಿ ನರ್ಸಿ ಅವರು ಪೊಲೀಸರಿಗೆ ದೂರು ನೀಡಿದ್ದು, ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಕಾಂಬಿಕಾ ಅವರು ತಂದೆ, ತಾಯಿ, 6 ಮಂದಿ ಸಹೋದರಿಯರು ಮತ್ತು ಸಹೋದರನನ್ನು ಅಗಲಿದ್ದಾರೆ.

- Advertisement -

Related news

error: Content is protected !!