- Advertisement -
- Advertisement -
ಸುಳ್ಯ: ಬಾವಿಯ ರಿಂಗ್ನ ಬದಿಗೆ ಮಣ್ಣು ತುಂಬಿಸುತ್ತಿದ್ದ ವೇಳೆ ಮಣ್ಣಿನಲ್ಲಿ ಸಿಲುಕಿದ ಕಾರ್ಮಿಕನನ್ನು ರಕ್ಷಿಸಿದ ಘಟನೆ ಶನಿವಾರ ಸಂಜೆ ಸುಳ್ಯದ ಪಂಜದಲ್ಲಿ ನಡೆದಿದೆ.
ಪಂಜದ ಅಡ್ಡತ್ತೋಡು ಸಮೀಪ ಮನೆಯೊಂದರ ಬಾವಿಯ ರಿಂಗ್ನ ಹೊರ ಬದಿಗೆ ಮಣ್ಣು ತುಂಬುವ ಕೆಲಸವನ್ನು ಕೇರಳದ ಕಾರ್ಮಿಕರು ಮಾಡುತ್ತಿದ್ದರು. ಈ ವೇಳೆ ರಿಂಗ್ನ ಬದಿಯ ಮಣ್ಣು ಏಕಾಏಕಿ ಕೆಳಕ್ಕೆ ಕುಸಿದು, ಓರ್ವ ಕಾರ್ಮಿಕ ಮಣ್ಣಿನಲ್ಲಿ ಹೂತು ಹೋಗಿ ಕುತ್ತಿಗೆಯಿಂದ ಮೇಲೆ ಭಾಗ ಮಾತ್ರ ಮೇಲಕ್ಕೆ ಉಳಿದಿದ್ದು, ಮುಕ್ಕಾಲು ಭಾಗ ಮಣ್ಣಿನಲ್ಲಿ ಹೂತು ಹೋಗಿದ್ದರು ಎಂದು ತಿಳಿದುಬಂದಿದೆ.
ಕೂಡಲೇ ಸ್ಥಳದಲ್ಲಿದ್ದವರು ಹಾಗೂ ಜೆಸಿಬಿ ಸಹಾಯದಿಂದ ಕಾರ್ಮಿಕನ ಮೇಲಿಂದ ಮಣ್ಣು ತೆಗೆದು ಅವರನ್ನು ರಕ್ಷಿಸಿದ್ದಾರೆ. ಆ ಬಳಿಕ ಅಂಬ್ಯುಲೆನ್ಸ್ ನಲ್ಲಿ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
- Advertisement -