ಬೆಂಗಳೂರು: ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಆತ್ಮಹತ್ಯೆಗೆ ಶರಾಣದ ಡಿವೈಎಸ್ಪಿ ಲಕ್ಷ್ಮೀ ಅವರು ಕೋಲಾರ ಮೂಲದವರಾಗಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿಮ ತುರುವಾಲಟ್ಟಿ ಗ್ರಾಮದವರು. ತಂದೆ ವೆಂಕಟೇಶಪ್ಪ ಡಿಸಿಸಿ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿದ್ದು, ಮಗಳ ಸಾವು ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೀ ತಂದೆ ವೆಂಕಟೇಶ್ ನೀಡಿದ್ದ ದೂರಿನ ಆಧಾರದ ಮೇಲೆ ಮನು, ಪ್ರಜ್ವಲ್ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಡಿವೈ ಎಸ್ ಪಿ ಲಕ್ಷ್ಮೀ ಸ್ನೇಹಿತರಾಗಿರುವ ಮನು, ಪ್ರಜ್ವಲ್ ಸೇರಿದಂತೆ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 174(3) ಅಡಿ ಪ್ರಕರಣ ದಾಖಲಾಗಿತ್ತು.

ಲಕ್ಷ್ಮೀ ತಂದೆ ವೆಂಕಟೇಶ್, ತಮ್ಮ ಮಗಳ ಸಾವಿನ ಬಗ್ಗೆ ಹಲವು ಅನುಮಾನವಿದೆ. ಮನು ಹಾಗೂ ಪ್ರಜ್ವಲ್ ಅವರ ಹೇಳಿಕೆಗಳೂ ಸಾಕಷ್ಟು ಶಂಕೆ ತರುತ್ತಿದೆ ಎಂದು ಆರೋಪಿಸಿದ್ದರು. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ಲಕ್ಷ್ಮೀ 2012ರಲ್ಲಿ ಪೋಷಕರ ವಿರೋಧದ ನಡುವೆಯೂ ನವೀನ್ ಎಂಬುವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ಮದುವೆಯ ನಂತರ ಲಕ್ಷ್ಮೀ ಕೋಣನಕುಂಟೆಯಲ್ಲಿ ವಾಸವಿದ್ದರು. ನವೀನ್ ಹೈದರಾಬಾದ್ ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಇವರ ದಾಂಪತ್ಯ ಜೀವನ ಸರಿ ಇರಲಿಲ್ಲ. ಇದೇ ಕೊರಗಿನಲ್ಲೇ ಲಕ್ಷ್ಮೀ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗ್ತಿದೆ.

ಮೂರು ದಿನಗಳ ಹಿಂದೆ ನಾಗರಬಾವಿಯಲ್ಲಿರುವ ಸ್ನೇಹಿತೆಯ ಅಪಾರ್ಟ್ಮೆಂಟ್ಗೆ ದಂಪತಿ ಆಗಮಿಸಿದ್ದರು. ನಿನ್ನೆಯೂ ಸಹ ಸ್ನೇಹಿತೆ ಮನೆಗೆ ಬಂದು ಪಾರ್ಟಿ ಮಾಡಿದ್ದರು. ಬಳಿಕ ರೂಮ್ಗೆ ತೆರಳಿದ್ದ ಡಿಎಸ್ಪಿ ಲಕ್ಷ್ಮೀ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

