2021ರಲ್ಲಿ ಸರ್ಕಾರ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಒಂದರಿಂದ ಎಂಟನೇ ತರಗತಿಯವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಮಾಡುತ್ತಿದ್ದು, ಬಳಿಕ ಸರ್ಕಾರ ಸಮೀಕ್ಷೆಯನ್ನು ಮಾಡಿದ ಮೇಲೆ ಶೇಕಡಾ 70 ರಷ್ಟು ಮಕ್ಕಳು ಮೊಟ್ಟೆ ಬೇಕು ಎಂದು ತಿಳಿಸಿದ್ದರು. ಇದಾದ ಮೇಲೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಾರದ ಎರಡು ದಿನ ಮೊಟ್ಟೆ ವಿತರಣೆ ಮಾಡಲು ಸೂಚಿಸಲಾಯಿತು.ಬಳಿಕ ಪೋಷಕರು 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಮೊಟ್ಟೆ ನೀಡುವಂತೆ ಮನವಿ ಮಾಡಿತ್ತು. ಅದರಂತೆ ಸಿಎಂ ಸಿದ್ದರಾಮಯ್ಯನವರು ಒಂದರಿಂದ ಹತ್ತನೇ ತರಗತಿಯವರೆಗೂ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ನೀಡುವ ಯೋಜನೆ ವಿಸ್ತರಣೆ ಮಾಡಿದ್ದರು.
ಇದರಿಂದ ಸಂತಸಗೊಂಡು ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಳಲಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಆಶಾ ನೆಹರು ಪಾಟೀಲ್ ರಾಜ್ಯ ಸರಕಾರದ ಮೊಟ್ಟೆ, ಹಾಲು ವಿತರಣೆ ಯೋಜನೆ ಬಗ್ಗೆ ಶ್ಲಾಘಿಸಿ “ವಿದ್ಯಾರ್ಥಿಸ್ನೇಹಿ ಸಿಎಂ” ಎಂದು ಪತ್ರ ಬರೆದು ಸಿಎಂಗೆ ಅಭಿನಂದನೆ ಸಲ್ಲಿಸಿದ್ದರು. ಆಶಾಳ ಪತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡು ಸಿದ್ಧರಾಮಯ್ಯನವರು ಅಭಿನಂದನೆ ತಿಳಿಸಿದ್ದರು. ಧಾರವಾಡ ಜಿಲ್ಲೆಗೆ ಸಿಎಂ ಭೇಟಿ ಹಿನ್ನೆಲೆ ವಿಮಾನ ನಿಲ್ದಾಣಕ್ಕೆ ಆಶಾ ಕೂಡ ಆಗಮಿಸಿದ್ದು, ಈ ವೇಳೆ ಸಿಎಂ ಸಿದ್ಧರಾಮಯ್ಯನವರು ಆಶಾಗೆ ಶೇಕ್ ಹ್ಯಾಂಡ್ ನೀಡಿ ಅಭಿನಂದಿಸಿದ್ದರು.