



ವಿದ್ಯುತ್ ಕಂಬ ಸರಿಪಡಿಸುತ್ತಿರುವ ವೇಳೆ ವಿದ್ಯುತ್ ತಂತಿ ತಗುಲಿ ಲೈನ್ ಮ್ಯಾನ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನದ ಹೊಳೆನರಸೀಪುರ ತಾಲ್ಲೂಕಿನ ಹೊನ್ನಾವರ ಗ್ರಾಮದ ಬಳಿ ನಡೆದಿದೆ.
ಮೃತಪಟ್ಟವರನ್ನು ಸಿ.ಹಿಂದಲಹಳ್ಳಿ ಗ್ರಾಮದ ಅಭಿಕುಮಾರ್ ಹೆಚ್.ಎಸ್. (26) ಎಂದು ಗುರುತಿಸಲಾಗಿದೆ.
ಮೃತ ಅಭಿಕುಮಾರ್ ಬಂಡಿಶೆಟ್ಟಿಹಳ್ಳಿ ಶಾಖಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ರಾಘವೇಂದ್ರ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಮರವನ್ನು ಶೇ.75 ರಷ್ಟು ಕಡಿಯಲಾಗಿತ್ತು. ಆ ವೇಳೆ ಮರ ವಿದ್ಯುತ್ ತಂತಿ ಮೇಲೆ ಬೀಳುವುದನ್ನು ಅಭಿಕುಮಾರ್ ಗಮನಿಸಿದ್ದಾನೆ. ಕೂಡಲೇ ಮರ ಕಡಿಯುವುದನ್ನು ನಿಲ್ಲಿಸಿ ವಿದ್ಯುತ್ ಕಂಬ ಏರಿ ಲೈನ್ ತೆಗೆಯುತ್ತಿದ್ದ.
ಇದೇ ವೇಳೆ ವಿದ್ಯುತ್ ಕಂಬದ ಮೇಲೆ ಮರ ಬಿದ್ದಿದೆ. ಪರಿಣಾಮ ವಿದ್ಯುತ್ ಕಂಬದಿಂದ ಕೆಳಗೆ ಬಿದ್ದ ಅಭಿಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಹೊಳೆನರಸೀಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.