ಐದು ಶತಮಾನಗಳ ಹೋರಾಟ, ಲಕ್ಷಾಂತರ ಕರ ಸೇವಕರ ಪರಿಶ್ರಮ, ಸಾವಿರಾರು ಕಾರ್ಯಕರ್ತರ ಬಲಿದಾನದಕ್ಕೆ ಸಂದ ಜಯ
ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭವ್ಯ ರಾಮ ಮಂದಿರದ ಪ್ರಾಣಪ್ರತಿಷ್ಠೆ ಇಂದು ನೆರವೇರಿದೆ. ಅಯೋದ್ಯಾನಗರಿಯಲ್ಲಿ ಮರ್ಯಾದಾ ಪುರುಷೋತ್ತಮ ವಿರಾಜಮಾನನಾಗಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ವಿಶೇಷ ಪೂಜೆ ಸಲ್ಲಿಸಿ, ಹಲವು ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ಪ್ರತಿಷ್ಠಾಪನೆ ಬಳಿಕ ಪ್ರಧಾನಿ ಮೋದಿಯವರು ಮೊದಲ ಮಂಗಳಾರತಿ ನೆರವೇರಿಸಿದ್ದಾರೆ.
ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ನ ಸರಸಂಘ ಚಾಲಕ ಮೋಹನ್ ಭಾಗವತ್, ರಾಜ್ಯಪಾಲೆ ಆನಂದಿ ಬೆನ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ, ಪೇಜಾವರ ಶ್ರೀಗಳು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಸೇರಿದಂತೆ ಈ ಮಹತ್ವದ ಸಮಾರಂಭವನ್ನು ಜಾಗತೀಕರಣಗೊಳಿಸುವ ನಿಟ್ಟಿನಲ್ಲಿ ವಿವಿಧ 50 ದೇಶಗಳನ್ನು ಪ್ರತಿನಿಧಿಸುವ 92 ವಿಶೇಷ ಆಹ್ವಾನಿತರು ಈ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದಾರೆ.
ಮಧ್ಯಾಹ್ನ 12.20 ಕ್ಕೆ ಸರಿಯಾಗಿ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಿದ್ದು , ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ 12.29 ಕ್ಕೆ ನೆರವೇರಿದೆ. ಸುಮಾರು 2 ಗಂಟೆಗಳ ಕಾಲ 25 ರಾಜ್ಯದಗಳ ವಿವಿಧ ಸಂಗೀತ ವಾದ್ಯಗಳ ಮಂಗಲ ಧ್ವನಿ ಕಾರ್ಯಕ್ರಮವೂ ನೆರವೇರಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಹಿನ್ನೆಲೆ ಅಯೋಧ್ಯೆಯ ಇಡೀ ನಗರವನ್ನು 2500 ಕ್ವಿಂಟಾಲ್ಗೂ ಹೆಚ್ಚು ಹೂವಿನಿಂದ ಅಲಂಕರಿಸಲಾಗಿದ್ದು, ಪ್ರಾಣ ಪ್ರತಿಷ್ಠೆಯ ನಂತರ ಭಕ್ತರಿಗೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.
ಸಮಾರಂಭದಲ್ಲಿ ಎನ್ಎಸ್ಜಿ ಸ್ನೈಪರ್ಗಳ ಎರಡು ತಂಡಗಳು, ಆ್ಯಂಟಿ ಡ್ರೋನ್ ತಂತ್ರಜ್ಞಾನ ಹೊಂದಿದ ಎಟಿಎಸ್ ಕಮಾಂಡೋಗಳ ಆರು ತಂಡಗಳು ಮತ್ತು ಯುಪಿ ಮತ್ತು ಅರೆಸೇನಾ ಪಡೆಗಳ 15,000 ಪೊಲೀಸ್ ಸಿಬ್ಬಂದಿಯನ್ನು ಅಯೋಧ್ಯೆಯ ಭದ್ರತೆಗಾಗಿ ನಿಯೋಜಿಸಲಾಗಿದೆ. ಭಾರತದ ಈ ಐತಿಹಾಸಿಕ ಕ್ಷಣಗಳನ್ನು ತುಂಬಿಕೊಳ್ಳಲು, ಸಾವಿರಾರು ಹಿಂದೂ ಶ್ರದ್ಧಾ ಕೇಂದ್ರಗಳಲ್ಲಿ ಭಜನೆ ಹಾಗೂ ರಾಮ ಮಂತ್ರ ಜಪ-ತಪ ಸೇರಿದಂತೆ ಹಲವು ವೈದಿಕ ಧಾರ್ಮಿಕ ಕಾರ್ಯಕ್ರಮಗಳು ಮುಂದುವರೆದಿದೆ.