ಮಡಿಕೇರಿ: ಕುಡಿಯೋದಕ್ಕೆ ಮದ್ಯ ಸಿಕ್ಕಿಲ್ಲವೆಂದು ತನ್ನ ಕಾಲನ್ನು ತಾನೇ ಕತ್ತಿಯಿಂದ ಕಡಿದು ತುಂಡರಿಸಿಕೊಂಡ ವಿಚಿತ್ರ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.
ಕಾರ್ಮಾಡು ಗ್ರಾಮದ ಪಾಪಣ್ಣ(45)ಎಂಬಾತನೇ ತನ್ನ ಕಾಲನ್ನು ತಾನೆ ಕತ್ತರಿಸಿಕೊಂಡ ಭೂಪ.
ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಸಮೀಪದ ಕಾರ್ಮಾಡು ಗ್ರಾಮದಲ್ಲಿ ತನ್ನ ತಾಯಿಯೊಂದಿಗೆ ಇದ್ದ ಈತ ಮದ್ಯವ್ಯಸನಿಯಾಗಿದ್ದು, ಅಷ್ಟೇ ಅಲ್ಲದೇ ಕಳೆದ ಒಂದೆರಡು ವರ್ಷಗಳಿಂದ ಮಾನಸಿಕ ಖಿನ್ನತೆಗೂ ಒಳಗಾಗಿದ್ದನು. ಆತನ ತಾಯಿ ಕೂಲಿ ನಾಲಿ ಮಾಡಿ ಹೊಟ್ಟೆ ತುಂಬಿಸುವ ಜೊತೆಗೆ, ಆತನ ಮದ್ಯ ಸೇವನೆಗೂ ಹಣ ನೀಡುತ್ತಿದ್ದರು. ಕೂಲಿ ಮಾಡಿ ತಾಯಿ ಆತನ ಖರ್ಚಿಗೆ ಹಣ ಕೊಡುತ್ತಿದ್ದರು.
ಆದರೆ ಲಾಕ್ ಡೌನ್ ಆಗಿದ್ದರಿಂದ ಕೂಲಿಯೂ ಇಲ್ಲದೆ ತಾಯಿ ಹೊಟ್ಟೆ ತುಂಬಿಸಿಕೊಂಡರೆ ಸಾಕು ಎನ್ನುವ ಸ್ಥಿತಿ ತಲುಪಿದ್ದ ತಾಯಿ ಆತನಿಗೆ ಹಣ ನೀಡುವುದನ್ನು ನಿಲ್ಲಿಸಿದ್ದರು. ಹೀಗಾಗಿಯೇ ನಿನ್ನೆ ರಾತ್ರಿ ಕೂಡ ಆತ ಮದ್ಯ ಸೇವಿಸುವುದಕ್ಕೆ ಹಣ ಕೊಡುವಂತೆ ತನ್ನ ತಾಯಿಯೊಂದಿಗೆ ಜಗಳವಾಡಿದ್ದ. ಅಂತು ಕೊನೆಗೂ ಮದ್ಯ ಸೇವನೆಗೆ ಆತನಿಗೆ ಹಣ ಸಿಕ್ಕಿರಲಿಲ್ಲ. ಹೀಗಾಗಿ ಬುಧವಾರ ಸಂಜೆ ಪಾಪಣ್ಣ ತನ್ನ ತಾಯಿಯೊಂದಿಗೆ ಜಗಳವಾಡಿದ್ದ. ಜಗಳ ಮುಗಿಸಿ ಎಂದಿನಂತೆ ತನ್ನ ಮನೆಯಲ್ಲಿ ಮಲಗಿದ್ದ ಪಾಪಣ್ಣ ತಡರಾತ್ರಿ ತನ್ನ ಮನೆಯಲ್ಲಿಯೇ ಕತ್ತಿಯಿಂದ ತನ್ನ ಕಾಲನ್ನು ತಾನೇ ಕಡಿದುಕೊಂಡಿದ್ದಾನೆ.
ಕಡಿದ ರಭಸಕ್ಕೆ ಕಾಲು ಎರಡು ತುಂಡಾಗಿದೆ. ಬಲಗಾಲಿನ ಪಾದದ ಭಾಗ ಸಂಪೂರ್ಣ ಕತ್ತರಿಸಿ, ಎರಡು ತುಂಡಾಗಿದೆ. ಕಾಲು ತುಂಡಾಗಿದ್ದರಿಂದ ಭಾರೀ ಪ್ರಮಾಣದಲ್ಲಿ ರಕ್ತಸ್ರಾವವಾಗಿತ್ತು. ಇದರಿಂದ ಪಾಪಣ್ಣ ಬಹುತೇಕ ಅಸ್ವಸ್ಥನಾಗಿದ್ದ. ಗುರುವಾರ ಬೆಳಗ್ಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವನನ್ನು ಸ್ಥಳೀಯರು ಸಿದ್ಧಾಪುರ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಕಾಲು ಎರಡು ತುಂಡಾಗಿ ಬಿದ್ದಿದ್ದರಿಂದ ಅದನ್ನು ಜೋಡಿಸಲು ಅವಕಾಶ ಆಗಬಹುದೇನೋ ಎಂದು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ವಿಚಿತ್ರ ಘಟನೆ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಸಂಬಂಧ ತನಿಖೆ ಆರಂಭಿಸಿದ್ದಾರೆ.