

ಮಂಗಳೂರು: ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 30ಕ್ಕೂ ವಿದ್ಯಾರ್ಥಿನಿಯರು ಹಾಸ್ಟೆಲಿನಲ್ಲಿ ಆಹಾರ ತೊಂದರೆ ಉಂಟಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಹಾಸ್ಟೆಲಿನಲ್ಲಿ ನೀರಿನ ಸಮಸ್ಯೆಯಿಂದಾಗಿ ಆಹಾರದಲ್ಲಿ ತೊಂದರೆ ಆಗಿದೆ ಎನ್ನಲಾಗುತ್ತಿದೆ. ಎರಡು ತಿಂಗಳಲ್ಲಿ ಇದು ಎರಡನೇ ಬಾರಿಗೆ ಈ ರೀತಿ ಆಗಿದೆ ಎನ್ನುವ ಮಾಹಿತಿ ವಿದ್ಯಾರ್ಥಿನಿಯರ ಹೆತ್ತವರ ಕಡೆಯಿಂದ ಬಂದಿದೆ. ಕೆಲವು ವಿದ್ಯಾರ್ಥಿನಿಯರಿಗೆ ವಾಂತಿ ಮತ್ತು ಭೇದಿ ಉಂಟಾಗಿದ್ದು, ಹೊಟ್ಟೆ ನೋವಿನಿಂದ ಬಳಲಿದ್ದಾರೆ. ರಾತ್ರಿ ವೇಳೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಬೆಳಗ್ಗಿನ ಹೊತ್ತಿಗೆ ಮರಳಿ ಹಾಸ್ಟೆಲ್ ಗೆ ರವಾನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾತ್ರಿಯೇ ವಿಷಯ ತಿಳಿದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಜೇಶ್ ಬಳಿ ಕೇಳಿದಾಗ, 16 ಮಂದಿ ವಿದ್ಯಾರ್ಥಿನಿಯರಿಗೆ ಸಮಸ್ಯೆ ಆಗಿತ್ತು. ಸ್ವಲ್ಪ ಮಟ್ಟಿಗೆ ವಾಂತಿ, ಭೇದಿ ಲಕ್ಷಣಗಳಿದ್ದವು. ಆತಂಕ ಪಡುವ ಅಗತ್ಯವಿಲ್ಲ. ಆಹಾರ ಸುರಕ್ಷತಾ ಅಧಿಕಾರಿಗಳು ಹಾಸ್ಟೆಲ್ ನಿಂದ ಆಹಾರದ ಮಾದರಿಗಳನ್ನು ಪರೀಕ್ಷೆಗೆ ಒಯ್ದಿದ್ದಾರೆ. ಈಗ ಯಾರೂ ಅಡಿಶನ್ ಇಲ್ಲ ಎಂದು ಹೇಳಿದ್ದಾರೆ.
ಯಾವ ಕಾರಣಕ್ಕೆ ಸಮಸ್ಯೆ ಆಗಿದೆ ಎನ್ನುವುದು ತಿಳಿದುಬಂದಿಲ್ಲ. ಪರಿಶೀಲನೆ ಮಾಡುತ್ತಾ ಇದ್ದೇವೆ. ನಾವು ಜಿಲ್ಲಾ ಘಟಕದಿಂದ ಎಲ್ಲ ಹಾಸ್ಟೆಲ್ ಗಳಿಗೂ ರುಟೀನ್ ಭೇಟಿ ಕೊಡುತ್ತೇವೆ. ತಪಾಸಣೆ ನಡೆಸುತ್ತೇವೆ ಎಂದಿದ್ದಾರೆ. ಎರಡು ತಿಂಗಳಲ್ಲಿ ಎರಡನೇ ಬಾರಿಗೆ ಇಂಥ ಸಮಸ್ಯೆ ಆಗಿದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ. ಇತ್ತೀಚೆಗೆ ಶಕ್ತಿನಗರದ ಹೀರಾ ನರ್ಸಿಂಗ್ ಕಾಲೇಜಿನಲ್ಲಿ ಇದೇ ರೀತಿ ಸಮಸ್ಯೆ ಆಗಿತ್ತು. ಕೇರಳದ ವಿದ್ಯಾರ್ಥಿನಿಯರು ಫುಡ್ ಪಾಯ್ಸನ್ ಸಮಸ್ಯೆಯಿಂದ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ, ಕಾಲೇಜಿಗೆ ಹತ್ತು ದಿನಗಳ ಕಾಲ ರಜೆ ಕೊಟ್ಟು ಎಲ್ಲ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿಕೊಡಲಾಗಿತ್ತು.