Friday, June 27, 2025
spot_imgspot_img
spot_imgspot_img

ಮಂಗಳೂರಿನಲ್ಲಿ ಮತ್ತೆ ಮರುಕಳಿಸಿತು ಹೀನ ಕೃತ್ಯ ! – ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ

- Advertisement -
- Advertisement -

ಮಂಗಳೂರು: ಉಳ್ಳಾಲದ ಕೊರಗಜ್ಜನ ಕಟ್ಟೆಗೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ ಪ್ರಕರಣದ ಬೆನ್ನಲ್ಲೇ ಮಂಗಳೂರು ನಗರದಲ್ಲಿ ಮತ್ತೊಂದು ಕಡೆ ಅದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಕಾಪಿಕಾಡ್ ಬಳಿಯ ದಡ್ಡಲ್ ಕಾಡ್ ಎಂಬಲ್ಲಿ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಮುಂದಿರುವ ಕಾಣಿಕೆ ಡಬ್ಬಿಯ ಹುಂಡಿ ಹಣವನ್ನು ಕದ್ದು ಅಪವಿತ್ರಗೊಳಿಸಲಾಗಿದೆ.

ನಿನ್ನೆ ರಾತ್ರಿ ದುಷ್ಕರ್ಮಿಗಳು ಬಬ್ಬುಸ್ವಾಮಿಯ ಕಾಣಿಕೆ ಡಬ್ಬಿಯಿಂದ ಹುಂಡಿ ಹಣವನ್ನು ಕಳವು ಮಾಡಿದ್ದು ಬಳಿಕ ಅದಕ್ಕೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ್ದಾರೆ. ಅಲ್ಲದೆ, ಹುಂಡಿಗೆ ಏನೇನೋ ವಿಚಿತ್ರ ರೀತಿಯಲ್ಲಿ ಬರೆದಿರುವ ಚೀಟಿ ಒಂದನ್ನು ಹಾಕಿದ್ದಾರೆ. ವಿಗ್ರಹಾರಾಧನೆ, ದೈವಿಕ ಶಕ್ತಿಯನ್ನು ನಿಂದಿಸಿ ಬರೆಯಲಾಗಿದೆ. ಇಂದು ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದ್ದು ಸ್ಥಳೀಯರು ಉರ್ವಾ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ, ರಾತ್ರಿ ವೇಳೆ ಈ ಜಾಗದಲ್ಲಿ ಬೀದಿ ದೀಪ ಆರಿಸಲಾಗಿತ್ತು‌. ಕಿಡಿಗೇಡಿಗಳು ಬಬ್ಬುಸ್ವಾಮಿ ಸ್ಥಾನದ ಆಸುಪಾಸಿನ ಬೀದಿ ದೀಪಗಳನ್ನು ಆರಿಸಿ, ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.

ಉರ್ವ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ವ್ಯಾಪ್ತಿಯಲ್ಲಿ ಇದು ನಾಲ್ಕನೇ ಪ್ರಕರಣವಾಗಿದ್ದು ಕಿಡಿಗೇಡಿಗಳು ಉದ್ದೇಶಪೂರ್ವಕ ಈ ರೀತಿ ಕೃತ್ಯ ಮಾಡುತ್ತಿದ್ದಾರೆ.

ತಿಂಗಳ ಹಿಂದೆ ಕೊಟ್ಟಾರದ ಬಬ್ಬುಸ್ವಾಮಿ ಮತ್ತು ಅತ್ತಾವರದ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ಇದೇ ರೀತಿ ಅವಹೇಳನ ಮಾಡಲಾಗಿತ್ತು. ಅದರಲ್ಲಿ ಬಿಜೆಪಿ ನಾಯಕರು ಮತ್ತು ಏಸುವಿನ ಬಗ್ಗೆ ಬರೆದಿದ್ದ ಭಿತ್ತಿಪತ್ರವೂ ಪತ್ತೆಯಾಗಿತ್ತು. ಬಳಿಕ ಉಳ್ಳಾಲ ವ್ಯಾಪ್ತಿಯಲ್ಲಿ ಕೊರಗಜ್ಜನ ಕಟ್ಟೆಯಲ್ಲಿ ಇದೇ ರೀತಿ ಕೃತ್ಯ ನಡೆದಿತ್ತು.

ಪೊಲೀಸರು ಈ ಬಗ್ಗೆ ತಪಾಸಣೆ, ತನಿಖೆ ನಡೆಸಿದ್ದರೂ, ಆರೋಪಿಗಳ ಪತ್ತೆಯಾಗಿಲ್ಲ. ಪತ್ತೆಯಾದ ಕರಪತ್ರಗಳ ಬರವಣಿಗೆ ಒಂದೇ ರೀತಿ ಕಂಡುಬಂದಿದ್ದು ಹಳೆ ಆರೋಪಿಗಳೇ ಈ ಕೃತ್ಯ ನಡೆಸಿರುವ ಸಾಧ್ಯತೆ ಕಂಡುಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!