ಮಂಗಳೂರು: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆಯೊಬ್ಬರು ಮೃತಪಟ್ಟ ಘಟನೆಯು ವರದಿಯಾಗಿದ್ದು, ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರರು ಆರೋಪಿಸಿ ಪ್ರತಿಭಟಿಸಿದ್ದು, ಸಾವಿಗೆ ಕಾರಣವಾದ ವೈದ್ಯರ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ನಿವಾಸಿ ಪ್ರದೀಪ್ ಆಚಾರ್ಯ ಎಂಬವರ ಪತ್ನಿ ಶಿಲ್ಪಾ ಆಚಾರ್ಯ(36) ಮೃತ ದುರ್ದೈವಿಯಾಗಿದ್ದು, ಆಸ್ಪತ್ರೆಯ ವೈದ್ಯರಾದ ವೀಣಾ ಭಗವಾನ್, ಡೀನ್ ಅಶೋಕ್ ಹೆಗ್ಡೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಶಿಲ್ಪಾ ಆಚಾರ್ಯರವರು ಹೆರಿಗೆ ನೋವಿನ ಹಿನ್ನಲೆ ಜುಲೈ 2ರಂದು ಮಂಗಳೂರಿನ ಕುಂಟಿಕಾನದ ಎ.ಜೆ. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷಿಸಿದ ಡ್ಯೂಟಿ ಡಾಕ್ಟರ್ ಸಿಜೇರಿಯನ್ ಮಾಡಿ ಡೆಲಿವರಿ ಮಾಡಬೇಕೆಂದು ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಮಹಿಳೆಯ ಮನೆಯವರು ವೈದ್ಯೆ ವೀಣಾರವರಿಗೆ ಕರೆ ಮಾಡಿ ರೋಗಿಯನ್ನು ಪರೀಕ್ಷಿಸುವಂತೆ ಮನವಿ ಮಾಡಿದ್ದು, ಆದರೇ ಭಾನುವಾರವಾದ ಕಾರಣ ಬರಲ್ಲ ಎಂದು ಹೇಳಿರುವುದಾಗಿ ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ವೇಳೆ ಬೇರೊಬ್ಬ ವೈದ್ಯರು ಹೆರಿಗೆ ಮಾಡಿಸಿದ್ದು, ಹೆಣ್ಣು ಮಗುವಿನ ಜನನದ ಬಳಿಕ ಗರ್ಭಕೋಶವನ್ನೇ ತೆಗೆಯಬೇಕು ಎನ್ನುವ ಸೂಚನೆ ಕುಟುಂಬಕ್ಕೆ ಶಾಕ್ ನೀಡಿದೆ. ಎರಡು ದಿನಗಳ ಬಳಿಕ ಬಾಣಂತಿಗೆ ಜ್ವರ ಬಂದಿದ್ದು, ಕೂಡಲೇ ಐಸಿಯುಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಮೇಜರ್ ಬ್ರೈನ್ ಡ್ಯಾಮೇಜ್ ಆಗಿದೆ ಎಂದು ವೈದ್ಯ ಮೂಲಗಳು ತಿಳಿಸಿವೆ.
ಆದರೆ ಜುಲೈ 25 ರಂದು ಬಾಣಂತಿ ಶಿಲ್ಪಾ ಆಚಾರ್ಯ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷಕ್ಕೆ ಆಕೆಯ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಆಕೆಯ ಪತಿ ಠಾಣೆಗೆ ದೂರು ನೀಡಿದ ಬಳಿಕ ಮಳೆಯ ನಡುವೆಯ ಆಸ್ಪತ್ರೆಯ ಮುಂಭಾಗದಲ್ಲಿ ಆಡಳಿತ ಮಂಡಳಿಯ ಮಧ್ಯಪ್ರವೇಶಕ್ಕಾಗಿ ಪ್ರತಿಭಟಿಸಲಾಯಿತು.
ಈ ವೇಳೆ ಪೊಲೀಸ್ ಬಲ ಪ್ರಯೋಗ ನಡೆದಿದೆ ಎನ್ನುವ ಆರೋಪವೂ ಕೇಳಿ ಬಂದಿದ್ದು,ಚೊಚ್ಚಲ ಹೆರಿಗೆಗೆ ದಾಖಲಾದ ಗರ್ಭಿಣಿಯ ಸಾವಿಗೆ ನ್ಯಾಯ ಕೇಳಿದಾಗ ಪೊಲೀಸರು ಬಲ ಪ್ರಾಯೋಗಿಸಿ ಶವ ಸಾಗಿಸಿದ್ದಾರೆ ಎನ್ನುವ ಗಂಭೀರ ಆರೋಪ ವ್ಯಕ್ತವಾಗುವ ಮಧ್ಯೆ ಎ.ಜೆ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ನಾಗರೀಕ ಸಮಾಜ ಆಕ್ರೋಶ ಹೊರಹಾಕಿದೆ.