ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ ಅಖಿಲೇಶ್ ಶೆಟ್ಟಿ



ಮಂಗಳೂರು: ದೇಶದ್ರೋಹದ ಭಾಷಣದ ಮೂಲಕ ಸಮಾಜದಲ್ಲಿ ಶಾಂತಿ ಕೆಡಿಸುವಂತೆ ಪ್ರಚೋದಿಸಿದ ಜನ ಪ್ರತಿನಿಧಿ ಐವಾನ್ ಡಿ ಸೋಜರವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಖಿಲೇಶ್ ಶೆಟ್ಟಿ ಎಂಬವರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ದೂರು ದಾರ ದೂರಿನಲ್ಲಿ ಆ. 19ರಂದು ಕಾರ್ಯನಿಮಿತ್ತ ಮಂಗಳೂರು ಮಹಾನಗರ ಪಾಲಿಕೆಗೆ ತೆರಳಿದ್ದು ಆ ಸಮಯದಲ್ಲಿ ಪಾಲಿಕೆಯ ಮುಂಬಾಗದಲ್ಲಿ ಒಂದಷ್ಟು ಜನ ಸೇರಿರುವುದು ಕಂಡುಬಂದಿದ್ದು, ವಿಷಯ ಏನೆಂದು ತಿಳಿದುಕೊಳ್ಳುವ ಸಲುವಾಗಿ ನಾನು ಅಲ್ಲಿ ಹೋಗಿದ್ದು ಮೂಡಾ ಹಗರಣದಲ್ಲಿ ಮುಖ್ಯಮಂತ್ರಿಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ನಡೆಸುವ ಸಲುವಾಗಿ ಅನುಮತಿ ನೀಡಿದ್ದು ಅದರ ವಿರುದ್ದವಾಗಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿದುಬಂತು. ಈ ವೇಳೆ ವಿಧಾನ ಪರಿಷತ್ತಿನ ಸದಸ್ಯ ಐವನ್ ಡಿಸೋಜ ಭಾಷಣ ಮಾಡುತ್ತಿದ್ದು ಮಾನ್ಯ ರಾಜ್ಯಪಾಲರ ವಿರುದ್ದ ಮಾತನಾಡುವ ಸಲುವಾಗಿ “ಓಂದು ವೇಳೆ ರಾಷ್ಟ್ರಪತಿಗಳು ರಾಜ್ಯಪಾಲರನ್ನು ಹಿಂದಕ್ಕೆ ಕರೆಸದೆ ಇದ್ದರೆ ಬಾಂಗ್ಲಾದೇಶದ ಅಧ್ಯಕ್ಷರು ರಾತ್ರೋ ರಾತ್ರಿ ಓಡಿ ಹೋದ್ರಲ್ಲ ಅದೇ ಪರಿಸ್ಥಿತಿ ಗವರ್ನರ್ ಆಫೀಸ್ ಗೆ ಬರ್ತದೆ, ನಮ್ಮ ಮುಂದಿನ ಹೋರಾಟ ಚಲೋ ಗವರ್ನರ್ ಆಫೀಸ್ ಎಂಬುದಾಗಿ ಪ್ರಚೋಧನಕಾರಿ ಭಾಷಣ ಮಾಡಿ ದಂಗೆ ಎಬ್ಬಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಭಾಷಣದಿಂದ ಪ್ರಚೋದನೆಗೊಂಡು ಕಾರ್ಯಕರ್ತರು ಅದೇ ಸಮಯದಲ್ಲಿ ಪಾಲಿಕೆಯ ಮುಂಬಾಗದಲ್ಲಿ ಚಲಿಸುತ್ತಿದ್ದ ಬಸ್ಗೆ ಕಲ್ಲನ್ನು ಎಸೆದಿರುತ್ತಾರೆ ಹಾಗೂ ಟಯರ್ ಹೊತ್ತಿಸುವ ಮೂಲಕ ಸಮಾಜದಲ್ಲಿ ಭಯದ ವಾತಾವರಣ ಮೂಡಿಸಿರುತ್ತಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಈ ಬಗ್ಗೆ ಐವಾನ್ ಡಿ ಸೋಜರವರ ವಿರುದ್ದ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.