


ಮಂಗಳೂರು: ಯುವಕನೋರ್ವ ಮೂಡುಬಿದಿರೆಯ ಖಾಸಗಿ ಕಾಲೇಜಿನ ತರಗತಿಗೆ ಅಕ್ರಮವಾಗಿ ಪ್ರವೇಶಿಸಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಚುಚ್ಚಿ ಹಲ್ಲೆಗೈದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕೃತ್ಯ ಎಸಗಿದ ಆರೋಪಿ ಮಂಜುನಾಥ ಎಂಬಾತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದವರಾದ ಮಂಜುನಾಥ್ ಹಾಗೂ ವಿದ್ಯಾರ್ಥಿನಿ ಪಿಯುಸಿ ವರೆಗೆ ಜೊತೆಯಾಗಿ ವಿದ್ಯಾಭ್ಯಾಸ ನಡೆಸಿದ್ದರು ಎನ್ನಲಾಗಿದೆ. ಈ ನಡುವೆ ಯುವಕ ಕಾಲೇಜು ತೊರೆದಿದ್ದು, ಹುಡುಗಿ ಶಿಕ್ಷಣ ಮುಂದುವರಿಸಿದ್ದಳು. ಪಿಯುಸಿವರೆಗೆ ಜೊತೆಯಾಗಿದ್ದ ಇವರ ನಡುವೆ ಪ್ರೇಮವಿತ್ತು ಎನ್ನಲಾಗಿದೆ. ಈ ವಿಚಾರ ಹುಡುಗಿಯ ಮನೆಯವರಿಗೆ ತಿಳಿಯುತ್ತಿದ್ದಂತೆ ಆಕೆಯ ಬಳಿಯಿದ್ದ ಮೊಬೈಲ್ ವಾಪಸ್ ಪಡೆದಿದ್ದರು. ಅಲ್ಲದೆ ಆತನಿಂದ ದೂರವಿದ್ದು, ಕಲಿಕೆಯತ್ತ ಗಮನ ಕೊಡು ಎಂದು ಎಚ್ಚರಿಸಿದ್ದರು. ಇದರಿಂದ ವಿದ್ಯಾರ್ಥಿನಿ ಮೊಬೈಲ್ನಿಂದ ದೂರವಿದ್ದು, ಆತನನ್ನು ನಿರ್ಲಕ್ಷಿಸತೊಡಗಿದ್ದಳು.
ಇದರಿಂದ ಕೋಪಗೊಂಡ ಯುವಕ ಎರಡು ದಿನಗಳ ಹಿಂದಷ್ಟೇ ಮೂಡುಬಿದಿರೆಗೆ ಆಗಮಿಸಿ ಲಾಡ್ಜ್ ನಲ್ಲಿ ತಂಗಿದ್ದು, ಆಕೆಯ ಭೇಟಿಗೆ ಮುಂದಾಗಿದ್ದಾನೆ. ಅದು ಸಾಧ್ಯವಾಗದ ಹಿನ್ನಲೆ ಸೋಮವಾರ ಬೆಳಗ್ಗೆ ಕಾಲೇಜಿಗೆ ತೆರಳಿ ಯುವತಿ ಇದ್ದ ತರಗತಿಗೆ ಏಕಾಏಕಿ ನುಗ್ಗಿ ಕತ್ತರಿಯಿಂದ ಇರಿದಿದ್ದಾನೆ ಎನ್ನಲಾಗಿದೆ.
ಕೂಡಲೇ ಅಲ್ಲಿದ್ದ ಇತರೆ ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಆರೋಪಿ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.