


ಮಂಗಳೂರು: ವ್ಯಕ್ತಿಯೋರ್ವರು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯದ ವ್ಯಕ್ತಿ ಮಂಗಳೂರು ನಗರದ ಹಂಪನಕಟ್ಟೆಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗುಂಡ್ಲು ಪೇಟೆಯ ನಿವಾಸಿ ಮಹಾದೇವ ಸ್ವಾಮಿ ಎಂದು ಗುರುತಿಸಲಾಗಿದೆ.
ದೊರೆತ ಮಾಹಿತಿ ಪ್ರಕಾರ, ಬೇಕರಿಯಲ್ಲಿ ಮ್ಯಾನೇಜರ್ ಆಗಿ ರೋಹಿತ್ ಪೂಜಾರಿ ಕೆಲಸ ಮಾಡುತ್ತಿದ್ದರು. ಅವರು ಕೆಲಸದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗಿದ್ದು, ಈ ವೇಳೆ ಬೇಕರಿಯ ಹಣದ ವಹಿವಾಟವನ್ನು ಮಹಾದೇವ ಸ್ವಾಮಿ ನೋಡಿಕೊಳ್ಳುತ್ತಿದ್ದರು.
ಆದರೆ ನ.26ರಂದು ದಿನದ ವ್ಯವಹಾರದ ಹಣವನ್ನು ಮಹಾದೇವ ಸ್ವಾಮಿ ಬ್ಯಾಂಕ್ಗೆ ಜಮೆ ಮಾಡಿಲ್ಲ. ರಾತ್ರಿ ರೂಮಿಗೆ ತೆರಳಿದ್ದ ಆತ ಮರುದಿನ ರೂಮಿನಿಂದ ನಾಪತ್ತೆಯಾಗಿದ್ದಾರೆ. ಅಲ್ಲದೆ ಮೊಬೈಲ್ ಕೂಡಾ ಬಿಟ್ಟು ಹೋಗಿದ್ದು, ಡೆತ್ ನೋಟ್ ಕೂಡ ಬರೆದಿಟ್ಟಿದ್ದಾನೆ ಎನ್ನಲಾಗಿದೆ.
“ನನ್ನನ್ನು ಹುಡುಕಬೇಡಿ, ನಾನು ಸಿಗುವುದಿಲ್ಲ, ಪ್ಲೀಸ್ ನನ್ನನ್ನು ಕ್ಷಮಿಸಿ, ಬದುಕಲು ಅರ್ಹನಲ್ಲ, ಸಾರಿ… ನನ್ನ ಸಾವಿಗೆ ನಾನೇ ಕಾರಣ” ಎಂದು ಡೆತ್ ನೋಟ್ ಬರೆದಿಟ್ಟು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.