


ಮಣಿಪಾಲ: ಹಸುಗಳಿಗೆ ಹುಲ್ಲು ತರಲೆಂದು ಗುಡ್ಡಕ್ಕೆ ತೆರಳಿದ್ದ ವೃದ್ಧೆಯೋರ್ವರು ಮನೆಯ ಎದುರಿನ ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮಣಿಪಾಲ ಸರಳೇಬೆಟ್ಟುವಿನ ನೆಹರು ನಗರದಲ್ಲಿ ನಡೆದಿದೆ. ಮೃತ ವೃದ್ಧೆಯನ್ನು ಪುಷ್ಪಾ ನಾಯ್ಕ್ (66) ಎಂದು ಗುರುತಿಸಲಾಗಿದೆ. ವೃದ್ಧೆಯ ಮೃತದೇಹದ ಮೇಲೆ ಗಾಯದ ಕುರುಹುಗಳಿದ್ದು, ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ನ. 28 ನೇ ಗುರುವಾರ ಸಂಜೆ ಹಸುಗಳಿಗೆ ಹುಲ್ಲು ತರಲೆಂದು ವೃದ್ಧೆ ಮನೆಯ ಎದುರಿನ ಗುಡ್ಡಕ್ಕೆ ತೆರಳಿದ್ದರು. ಬಳಿಕ ಎಷ್ಟೇ ಹೊತ್ತಾದರೂ ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಇದನ್ನು ಗಮನಿಸಿದ ಮನೆಯವರು ನೆರೆಮನೆಯವರ ಜೊತೆಗೂಡಿ ಗುಡ್ಡದಲ್ಲಿ ಹುಡುಕಾಡಿದ್ದಾರೆ. ಆದರೆ ಪುಷ್ಪ ನಾಯ್ಕ್ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಶುಕ್ರವಾರ(ನ.29) ಬೆಳಿಗ್ಗೆ ಮನೆ ಎದುರು ಗುಡ್ಡೆಯಲ್ಲಿ ಪುಷ್ಪಾ ನಾಯ್ಕ್ ಶವ ಪತ್ತೆಯಾಗಿದ್ದಾರೆ.
ಅವರ ಕುತ್ತಿಗೆಯ ಭಾಗದಲ್ಲಿ ಗಾಯಗಳಾಗಿದ್ದು, ಕೈಗಳಿಗೂ ಪರಚಿದ ಗಾಯಗಳಾಗಿವೆ. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಕಾರಣ ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೆಯೋ ಅಥವಾ ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆಯೋ ಎಂಬುವುದು ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ. ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.