

ವಯಾನಾಡ್ ಅಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಅದೆಷ್ಟೋ ಕುಟುಂಬಗಳೇ ಇಲ್ಲದಂತಾಗಿದೆ. ಇನ್ನು ಬದುಕುಳಿದವರು ತನ್ನವರಿಗಾಗಿ ಪರಿತಪಿಸುತ್ತಿದ್ದಾರೆ. ಭೀಕರ ದುರಂತದಲ್ಲಿ ಆಂತ್ಯವನ್ನು ಕಂಡ ಕುಟುಂಬಗಳ ಒಂದೊಂದು ಕಥೆಯನ್ನು ಕೇಳಿದರೆ ಮನಸ್ಸು ಭಾರವಾಗುತ್ತದೆ. ಹಿರಿಯ ಮಗಳ ಮದುವೆಗೆ ಇನ್ನೇನು ನಾಲ್ಕು ತಿಂಗಳುಗಳು ಬಾಕಿ ಇದ್ದವು. ಅದು ಮನೆಯವರ ದೊಡ್ಡ ಕನಸಾಗಿತ್ತು. ಏನಾದರು ಮಳೆ ಬಂದರೆ ಅದಕ್ಕಾಗಿ ಸಿದ್ಧತೆ ಕೂಡಾ ಮಾಡಿಕೊಂಡಿದ್ದರು. ಆದರೆ ಇದೀಗ ಪ್ರಕೃತಿಯ ರುದ್ರ ನರ್ತನಕ್ಕೆ ಇಡೀ ಕುಟುಂಬವೇ ಬಲಿಯಾಗಿದೆ. ಮದುಮಗಳನ್ನೊಬ್ಬಳನ್ನು ಬಿಟ್ಟು ಉಳಿದವೆರೆಲ್ಲಾ ಉಂಟಾದ ಭೀಕರ ಭೂಕುಸಿತದಲ್ಲಿ ಮಣ್ಣು ಪಾಲಾಗಿದ್ದಾರೆ.
ಶಿವಣ್ಣ ಎಂಬವರಿಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡ ಮಗಳಿಗೆ ವಿವಾಹ ನಿಶ್ಚಿತಾರ್ಥ ಕೂಡಾ ಮಾಡಿದ್ದರು. ಇನ್ನೇನು ಡಿ. 26ರಲ್ಲಿ ವಿವಾಹ ಮಾಡುವುದಾಗಿ ನಿಶ್ಚಯಿಸಲಾಗಿತ್ತು. ಆದರೆ ಇದೀಗ ತಂದೆ, ತಾಯಿ, ಸಹೋದರಿಯನ್ನು ಕಳೆದುಕೊಂಡ ಮಗಳು ಅನಾಥೆಯಾಗಿದ್ದಾಳೆ. ಅಲ್ಲದೇ ಭೂಕುಸಿತದಿಂದಾಗಿ ಅಜ್ಜ ಅಜ್ಜಿಯನ್ನೂ ಕೂಡಾ ಕಳೆದುಕೊಂಡಿದ್ದಾಳೆ.
ಮನೆಯವರೆಲ್ಲರನ್ನು ಕಳೆದುಕೊಂಡ ಶೃತಿಗೆ ತನ್ನ 19 ವರ್ಷದ ತಂಗಿ ಶ್ರೇಯಾ ಮೃತದೇಹ ಸಿಕ್ಕಿದೆ. ತಂಗಿಯ ಮೃತದೇಹ ಕಂಡಂತೆ ಶೃತಿ ಕಣ್ಣೀರು ಸುರಿಸಿದ್ದಾಳೆ. ತನ್ನವರಿಗಾಗಿ ಹುಡುಕಾಡಿದ್ದಾಳೆ. ಅಮ್ಮ, ಅಪ್ಪನನ್ನು ಹುಡುಕಿ ಕೊಡಿ ಎಂದು ಕೇಳಿಕೊಂಡಿದ್ದಾಳೆ. ಶೃತಿ ಕೋಯಿಕ್ಕೋಡ್ನ ಮಿವ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಳು. ಆದರೀಗ ತನ್ನವರನ್ನು ಕಳೆದುಕೊಂಡು ಶೃತಿಗೆ ದಿಕ್ಕು ತೋಚದಂತಾಗಿದೆ. ಅಪ್ಪ-ಅಮ್ಮ, ತಂಗಿ, ಅಜ್ಜ-ಅಜ್ಜಿ ಮರಳಿ ಬರುತ್ತಾರೆ ಎಂದು ಕಣ್ಣೀರಿನಲ್ಲೇ ದಿನದೂಡುತ್ತಿದ್ದಾಳೆ.