ಕುಂದಾಪುರ: ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊರವಡಿ ಗ್ರಾಮದ ಹಳೆಕಟ್ಟು ಎಂಬಲ್ಲಿ ಎ. 28ರಂದು ಸಂಭವಿಸಿದೆ.
ಪತಿ ಹಾಗೂ ಆತನ ಮನೆಯವರು ಕಿರುಕುಳ ನೀಡಿರುವುದಾಗಿ ಆರೋಪಿಸಿ ಮೃತಳ ತಾಯಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕೊರವಡಿ ಗ್ರಾಮದ ಹಳೆಕಟ್ಟು ನಿವಾಸಿ ಜಗದೀಶ್ ಅವರ ಪತ್ನಿ ಸೌಜನ್ಯಾ (27) ಆತ್ಮಹತ್ಯೆ ಮಾಡಿ ಕೊಂಡವರು. ಈ ದಂಪತಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ.
ಕುಂಭಾಶಿ ನಿವಾಸಿಯಾದ ಸೌಜನ್ಯಾ ಅವರ ವಿವಾಹವು ಕೊರವಡಿಯ ಜಗದೀಶ್ ಅವರೊಂದಿಗೆ 2021ರ ಮೇ 1ರಂದು ನಡೆದಿತ್ತು. ಎ. 27ರಂದು ರಾತ್ರಿ 9 ಗಂಟೆಗೆ ಸೌಜನ್ಯಾ ತನ್ನ ಸೋದರಮಾವನಿಗೆ ಕರೆ ಮಾಡಿ ತನಗೆ ಪತಿ ಜಗದೀಶ, ಅವರ ತಾಯಿ , ಪತಿಯ ಅಕ್ಕಂದಿರು ಹಾಗೂ ಮೈದುನ ತುಂಬಾ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದ್ದರು.
ಈ ವೇಳೆ ಸೋದರಮಾವ ಬುದ್ದಿವಾದ ಹೇಳಿ ಒಳ್ಳೆಯ ರೀತಿಯಲ್ಲಿ ಸಂಸಾರ ನಡೆಸುವಂತೆ ತಿಳಿಸಿದ್ದರು. ಆದರೆ ಬಳಿಕ ಸೌಜನ್ಯಾ ಅವರು ಮತ್ತೆ ರಾತ್ರಿ 9.45ರ ವೇಳೆಗೆ ಮಾವನಿಗೆ ಅವರಿಗೆ ಕರೆ ಮಾಡಿ, ಪತಿ ಜಗದೀಶ್ ತನಗೆ ಹೊಡೆದು ಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಅದರಂತೆ ಸೌಜನ್ಯಾ ರವರ ಮಾವ , ಜಗದೀಶ್ ಅವರ ಮನೆಗೆ ತೆರಳಿದ್ದು, ಮನೆಯವರ ಜೊತೆ ಮಾತುಕತೆ ನಡೆಸಿ ತೆರಳಿದ್ದರು. ಆದರೆ ಎ. 27ರ ಮಧ್ಯರಾತ್ರಿ 12.34ಕ್ಕೆ ಜಗದೀಶ್ ಅವರು ಸೌಜನ್ಯಾ ರವರ ಮಾವನಿಗೆ ಕರೆ ಮಾಡಿ, ಕೂಡಲೇ ಮನೆಗೆ ಬನ್ನಿ ಎಂದು ತಿಳಿಸಿದ್ದರು. ಅದರಂತೆ ತೆರಳಿದಾಗ ಜಗದೀಶ್ ಅವರ ಮನೆಯವರು ಕಾರಿನಲ್ಲಿ ಮನೆಯಿಂದ ಕೋಟೇಶ್ವರದ ಆಸ್ಪತ್ರೆಗೆ ಹೊರಟಿದ್ದರು. ಅವರನ್ನು ಹಿಂಬಾಲಿಸಿಕೊಂಡು ಆಸ್ಪತ್ರೆಯಲ್ಲಿ ಹೋಗಿ ವಿಚಾರಿಸಿದಾಗ ಸೌಜನ್ಯಾ ಅವರು ಪತಿಯ ಮನೆಯ ಒಳಗಡೆ ರಾತ್ರಿ 9.30ರಿಂದ ಮಧ್ಯರಾತ್ರಿ 12.30ರ ಮಧ್ಯದ ಅವಧಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಿಳಿದುಬಂದಿತ್ತು.
ಘಟನಾ ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ನಂದಕುಮಾರ್, ಎಸ್ಐ ವಿನಯ್ ಕೊರ್ಲಹಳ್ಳಿ ಹಾಗೂ ಸಿಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.