ಮಂಗಳೂರು: ಸಂತ್ರಸ್ತೆಯ ಪೋಷಕರು ನಡೆಸಿದ ಪತ್ರಿಕಾಗೋಷ್ಠಿಯು ಎಸ್ಐಟಿ ಪ್ರಾಯೋಜಕತ್ವದ್ದು. ಯುವತಿಗೆ ಅನ್ಯಾಯ ಮಾಡಿರುವ ಆರೋಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸುವವರಿಗೆ ಎಸ್ಐಟಿ ತನಿಖಾ ಕಚೇರಿ ಎದುರು ಸೋಮವಾರದಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿಡಿ ಪ್ರಕರಣಕ್ಕೆ ಸಂಬ0ಧಿಸಿ ಅನಗತ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಹೆಸರನ್ನು ತಳುಕು ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಸಿಡಿಯಲ್ಲಿ ಇರುವ ಮಹಾನಾಯಕ ಯಾರು ಎಂಬುದು ಇಡೀ ದೇಶಕ್ಕೆ ಗೊತ್ತಾಗಿದೆ. ಪ್ರಕರಣದ ಹಾದಿ ತಪ್ಪಿಸುವ ಹುನ್ನಾರ ನಡೆಸುತ್ತಿರುವ ರಮೇಶ್ ಜಾರಕಿಹೊಳಿ ಅವರನ್ನು ಕೂಡಲೇ ಎಸ್ಐಟಿ ಬಂಧನ ಮಾಡಬೇಕು ಎಂದು ಮಿಥುನ್ ರೈ ಒತ್ತಾಯಿಸಿದರು.
ಉಪ ಚುನಾವಣೆಯ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಂತ್ರಸ್ತೆ ಈಗಾಗಲೇ ಹೇಳಿಕೆ ನೀಡಿದ್ದು, ಪೋಷಕರು ರಮೇಶ್ ಜಾರಕಿಹೊಳಿ ಅವರ ಬಂಧನದಲ್ಲಿ ಇದ್ದಾರೆ. ಅವರನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇಲ್ಲಿ ಪೋಷಕರ ಹೇಳಿಕೆ ಮುಖ್ಯವಲ್ಲ; ಸಂತ್ರಸ್ತೆ ಯುವತಿ ಹೇಳಿಕೆ ಮುಖ್ಯವಾಗುತ್ತದೆ. ಸಂತ್ರಸ್ತೆಯ ಕುಟುಂಬದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದು, ಈ ಹೇಳಿಕೆಯ ಸ್ಕೀಪ್ಟ್ ಎಸ್ಐಟಿ ತನಿಖಾ ಅಧಿಕಾರಿಗಳದ್ದು ಎಂದು ಅವರು ಆರೋಪಿಸಿದರು.