Saturday, June 28, 2025
spot_imgspot_img
spot_imgspot_img

ತುಳು ಭಾಷೆಯ ಅಧಿಕೃತ ಸ್ಥಾನಮಾನಕ್ಕಾಗಿ ಶಾಸಕ ಕಾಮತ್ ಬೇಡಿಕೆ..!

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ತುಳು ಭಾಷೆಯನ್ನು ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭೆಯ ಅಧಿವೇಶನದಲ್ಲಿ ಸ್ಪೀಕರ್ ಅವರಲ್ಲಿ ಮನವಿ ಮಾಡಿದರು.

ಗಮನ ಸೆಳೆಯುವ ಸೂಚನಾ ಕಲಾಪದ ಸಂದರ್ಭದಲ್ಲಿ ಪ್ರಸ್ತಾವವಾದ ವಿಷಯಕ್ಕೆ ದನಿಗೂಡಿಸಿದ ಶಾಸಕರು, ಕಳೆದ ಒಂದೂವರೆ ವರ್ಷದಲ್ಲಿ ತುಳು ಭಾಷೆಯ ಅಧಿಕೃತ ಮಾನ್ಯತೆ ಬಗ್ಗೆ ಎರಡು ಬಾರಿ ಮನವಿ ಮಾಡಿದ್ದೇನೆ. ದೇಶದ ಹಲವು ರಾಜ್ಯಗಳಲ್ಲಿ ಅಧಿಕೃತವಾಗಿ ಎರಡನೇ ಭಾಷೆಯನ್ನಾಗಿ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ. ಆದರೆ ಎರಡು ಸಾವಿರಕ್ಕಿಂತಲೂ ಅಧಿಕ ವರ್ಷಗಳ ಇತಿಹಾಸವುಳ್ಳ, ತನ್ನದೇ ಸ್ವಂತ ಲಿಪಿ ಹೊಂದಿರುವ ನಮ್ಮ ನಾಡಿನ ತುಳು ಭಾಷೆಗೆ ಇನ್ನೂ ಸಹ ರಾಜ್ಯದಲ್ಲಿ ಅಧಿಕೃತ ಮಾನ್ಯತೆ ಸಿಗದಿರುವುದು ಅತ್ಯಂತ ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.

ತುಳು ಭಾಷೆಯ ಅಧಿಕೃತ ಮಾನ್ಯತೆಯ ಕುರಿತಾಗಿ ಅತ್ಯಂತ ಮುತುವರ್ಜಿಯಿಂದ ಈ ಹಿಂದೆ ಡಾ.ಮೋಹನ್ ಆಳ್ವರವರು ಸಲ್ಲಿಸಿರುವ ವರದಿಯ ಸಮರ್ಪಕ ಅನುಷ್ಠಾನವಾಗಬೇಕು ಎಂದು ಹೇಳಿ, ತುಳು ಭಾಷೆಯಲ್ಲೇ ಯು.ಟಿ ಖಾದರ್ ಅವರನ್ನು ಉದ್ದೇಶಿಸಿ “ನೀವು ಸ್ಪೀಕರ್ ಆಗಿರುವಾಗಲೇ ಇದೊಂದು ಕೆಲಸ ಆಗಲಿ ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನತೆಯ ಪರವಾಗಿ ಕೈ ಮುಗಿದು ಮನವಿ ಮಾಡುತ್ತೇನೆ” ಎಂದರು. ಇದಕ್ಕೆ ಸ್ಪೀಕರ್ ಅವರೂ ಸಹ ತುಳು ಭಾಷೆಯಲ್ಲೇ ಸಾಕಾರಾತ್ಮಕವಾಗಿ ಸ್ಪಂದಿಸಿದ್ದು ಕರಾವಳಿ ಭಾಗದ ಶಾಸಕರು ಬೆಂಬಲಿಸಿದರು.

- Advertisement -

Related news

error: Content is protected !!