

ಕೊಡಗು ಜಿಲ್ಲೆಯ ಸೋಮವಾರ ಪೇಟೆಯಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದ ಚಿನ್ನದ ವ್ಯಾಪಾರಿಯೊಬ್ಬರು ಕುಶಾಲ ನಗರದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮಂಗಳೂರು ಮೂಲದ ಪ್ರದೀಪ್ ಆಚಾರ್ಯ (52) ಆತ್ಮಹತ್ಯೆ ಮಾಡಿಕೊಂಡ ಶಂಕಿತ ಆರೋಪಿ.
2022ರಲ್ಲಿ ಸೋಮವಾರ ಪೇಟೆ ಠಾಣಾ ವ್ಯಾಪ್ತಿಯಲ್ಲಿ ದರೋಡೆಯೊಂದು ನಡೆದಿದ್ದು ಆ ದರೋಡೆಯಲ್ಲಿ ಆರೋಪಿ ದಕ್ಷಿಣಕನ್ನಡ ಜಿಲ್ಲೆಯ ಕರೋಪಾಡಿ ಜಲೀಲ್ ಕೊಲೆ ಪ್ರಕರಣದ ಆರೋಪಿ ರೋಷನ್ ಸಹಿತ ಆರು ಮಂದಿ ಭಾಗಿಯಾಗಿದ್ದು, ದರೋಡೆ ಮಾಡಿದ ಚಿನ್ನಾಭರಣಗಳನ್ನು ಪ್ರದೀಪ್ ಆಚಾರ್ಯನ ಬಳಿ ಗಿರವಿ ಇಟ್ಟಿದ್ದು, ಬಳಿಕ ಅದನ್ನು ಬಿಡಿಸದೆ ಪ್ರದೀಪ್ ಆಚಾರ್ಯ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.
ಆದರೆ, ಕಳೆದ ತಿಂಗಳು ಜುಲೈ 29 ರಂದು ರಾತ್ರಿ ನೇಮರಾಜ್ ಮತ್ತು ಪತ್ನಿ ಅಂಗಡಿ ವ್ಯಾಪಾರ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಸೋಮವಾರಪೇಟೆಯಲ್ಲಿ ನಡೆದ ಈ ದರೋಡೆ ಪ್ರಕರಣದಲ್ಲೂ ಆರೋಪಿ ರೋಷನ್ ಭಾಗಿಯಾಗಿದ್ದು ಈಗಾಗಲೇ ಪೊಲೀಸರು ಏಳು ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ತನಿಖೆಯ ವೇಳೆ ದರೋಡೆ ಪ್ರಕರಣದಲ್ಲಿ ಪ್ರದೀಪ್ ಪರೋಕ್ಷವಾಗಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು ದರೋಡೆಕೋರರ ಬಳಿಯಿದ್ದ ಚಿನ್ನಾಭರಣವನ್ನು ಗಿರವಿ ಇಡುವಲ್ಲಿ ಪ್ರದೀಪ್ ಭಾಗಿಯಾಗಿರುವ ಬಗ್ಗೆ ಸುಳಿವು ದೊರೆತ ನಂತರ ಪ್ರಕರಣದ ತನಿಖೆ ನಡೆಸಲಾಗಿದೆ. ಪೊಲೀಸರು ಕ್ರಮ ಕೈಗೊಳ್ಳಬಹುದೆಂಬ ಭಯದಿಂದ ಪ್ರದೀಪ್ ಅವರು ಮಂಗಳವಾರ ಆ್ಯಸಿಡ್ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.