ಮುಂಬೈ: ಮಾಲೀಕ ಸಂಬಳ ನೀಡದ್ದಕ್ಕೆ ಕೋಪಗೊಂಡ ಚಾಲಕ ಐದು ಬಸ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಮುಂಬೈನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಎಂಎಚ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
24 ವರ್ಷದ ಅಜಯ್ ಸರಸ್ವತ್ ಬಂಧಿತ ಚಾಲಕ. ಕಳೆದ ಒಂದು ತಿಂಗಳಲ್ಲಿ ಆತ್ಮಾರಾಂ ಟ್ರಾವೆಲ್ ಏಜೆನ್ಸಿಯ ಐದು ಬಸ್ ಗಳು ಬೆಂಕಿಗಾಹುತಿಯಾಗಿವೆ. 2020 ಡಿಸೆಂಬರ್ 24ರಂದು ಮೂರು ಮತ್ತು 2021 ಜನವರಿ 21ರಂದು ಎರಡು ಬಸ್ ಗಳು ಸುಟ್ಟು ಕರಕಲಾಗಿದ್ದವು. ಕೇವಲ ಆತ್ಮಾರಾಂ ಟ್ರಾವೆಲ್ ಏಜೆನ್ಸಿ ಬಸ್ ಗಳಿಗೆ ಬೆಂಕಿ ತಗುಲಿತ್ತಿದ್ದರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರು ಬಸ್ ಗಳಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ತಗುಲಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದ್ರೆ ಮತ್ತೆ ಒಂದು ತಿಂಗಳ ನಂತರ ಬಸ್ ಗಳಿಗೆ ಬೆಂಕಿ ತಗುಲಿದ್ದರಿಂದ ಪೊಲೀಸರು ತನಿಖೆ ಮಾರ್ಗ ಬದಲಿಸಿ, ಟ್ರಾವೆಲ್ ಏಜೆನ್ಸಿ ಮಾಲೀಕನನ್ನೇ ವಿಚಾರಣೆಗೆಗೆ ಒಳಪಡಿಸಿದ್ದರು.
ವಿಚಾರಣೆ ವೇಳೆ ಚಾಲಕನ ಅಜಯ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಕೆಲ ದಿನಗಳಿಂದ ಸಂಬಳ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿರೋದನ್ನ ತಿಳಿಸಿದ್ದರು. ಅಜಯ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಬೆಂಕಿ ಹಚ್ಚಿರೋದು ತಾನೇ ಎಂದು ಒಪ್ಪಿಕೊಂಡಿದ್ದಾನೆ.
ಕೊರೊನಾ ಸಮಯದಲ್ಲಿ 10 ದಿನದ ಮಟ್ಟಿಗೆ ಅಜಯ್ ನನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಆದರೆ ಗೋವಾದ ಬಳಿ ಅಜಯ್ ಚಾಲನೆಯ ಬಸ್ ಅಪಘಾತಕ್ಕೊಳಗಾಗಿತ್ತು. ಹೀಗಾಗಿ ಅಜಯ್ ಸಂಬಳವನ್ನ ಮಾಲೀಕ ನೀಡಿರಲಿಲ್ಲ. ಇದೇ ಕೋಪದಿಂದ ಎರಡು ಬಾರಿ ಒಟ್ಟು 5 ಬಸ್ ಗಳಿಗೆ ಅಜಯ್ ಬೆಂಕಿ ಹಚ್ಚಿದ್ದನು.