ವಿಜಯಪುರ: ದಲಿತ ಹುಡುಗನನ್ನ ಪ್ರೀತಿಸಿದ ಕಾರಣಕ್ಕೆ ಮುಸ್ಲಿಂ ಹುಡುಗಿಯ ತಂದೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರದ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಬರ್ಬರ ಹತ್ಯೆ ಕಂಡು ಗುಮ್ಮಟನಗರಿ ಜನ ಬೆಚ್ಚಿಬಿದ್ದಿದ್ದಾರೆ. ಯುವಕನ ತಾಯಿಯೇ ಕಣ್ಣು ಮುಂದೇಯೇ ಇಡೀ ಘಟನೆ ನಡೆದಿದೆ. ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಬಾಲಕಿಯ ತಂದೆ ಹಾಗೂ ಆಕೆಯ ಸಹೋದರ ಸೇರಿ ಮಗಳು ಹಾಗೂ ಆಕೆಯ ಪ್ರಿಯಕರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಯುವಕ ಬಸವರಾಜ ಬಡಿಗೇರ (19) ಹಾಗೂ ಪಕ್ಕದ ಗ್ರಾಮ ಖಾನಾಪುರದ 18 ವರ್ಷದ ಯುವತಿ ಕೊಲೆಯಾದವರು.
ತನ್ನ ಅಜ್ಜನ ಮನೆಗೆ ಬಂದು ವಾಸವಾಗಿದ್ದಳು. ಇದೇ ಗ್ರಾಮದಲ್ಲಿ ಆಟೋ ಚಾಲಕನಾಗಿದ್ದ ಬಸವರಾಜ್ ಪರಿಚಯವಾಗಿತ್ತು. ಇಬ್ಬರ ಮಧ್ಯೆ ಸ್ನೇಹ ಬೆಳೆದು ಅದು ಪ್ರೇಮಾಂಕುರಕ್ಕೆ ಕಾರಣವಾಗಿತ್ತು. ಆದರೆ ಇವರಿಬ್ಬರ ಪ್ರೇಮಕ್ಕೆ ಯುವತಿ ಮನೆಯವರ ತೀವ್ರ ವಿರೋಧವಿತ್ತು. ಇಷ್ಟಾದರೂ ಆಟೋ ಡ್ರೈವರ್ ಬಸವರಾಜ್ ಹಾಗೂ ಯುವತಿ ನಡುವೆ ಪ್ರೀತಿ ಕಡಿಮೆಯಾಗಿರಲಿಲ್ಲ. ಆರು ತಿಂಗಳ ಹಿಂದೆ ಮನೆಯವರಿಗೆ ಈ ವಿಚಾರ ತಿಳಿದ ಬಳಿಕ ಇಬ್ಬರಿಗೂ ಎಚ್ಚರಿಕೆ ನೀಡಲಾಗಿತ್ತು. ಆದರೂ ಅವರ ಪ್ರೇಮ ಪಯಣ ಮುಂದುವರೆದಿತ್ತು.
ಆಗಾಗ ಇಬ್ಬರೂ ಒಬ್ಬರಿಗೊಬ್ಬರು ಭೇಟಿಯಾಗುತ್ತಿದ್ದರು. ಅದೇ ರೀತಿ ನಿನ್ನೆಯೂ ಇಬ್ಬರು ಪ್ರೇಮಿಗಳು ಸಲಾದಹಳ್ಳಿ ಗ್ರಾಮದ ಹೊರ ಭಾಗದಲ್ಲಿ ಒಟ್ಟಿಗೆ ಇದ್ದರು. ಈ ವೇಳೆ ಸ್ಥಳಕ್ಕೆ ಬಂದ ಯುವತಿಯ ಅಜ್ಜ ಇಬ್ಬರನ್ನೂ ವಿಚಾರಣೆ ನಡೆಸಿದ್ದಾನೆ. ಬಳಿಕ ಯುವಕನನ್ನು ಗ್ರಾಮದಲ್ಲಿ ಸುತ್ತಾಡಿಸಿ ತಮ್ಮ ತೋಟಕ್ಕೆ ಕರೆದುಕೊಂಡು ಹೋಗಿ ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆ.
ಈ ವಿಷಯ ತಿಳಿದ ಯುವಕನ ಕುಟುಂಬಸ್ಥರು ಸ್ಥಳಕ್ಕೆ ತೆರಳಿ ಮಗನನ್ನು ಬಿಡಲು ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಯುವತಿಯ ಅಜ್ಜ, ಆಕೆಯ ಸಹೋದರ ಹಾಗೂ ಮಾವಂದಿರು ಯುವಕನ ತಾಯಿ ಹಾಗೂ ಸಹೋದರನ ಮುಂದೆಯೇ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಹುಟುಕಾಟ ಪೊಲೀಸರು ಆರಂಭಿಸಿದ್ದಾರೆ.